Wednesday, November 30, 2011

"ಭಾವಸಿಂಚನ" - ಎಲ್ಲೆಲ್ಲೂ ಹರುಷದ ಸಿಂಚನ!

ಗೆಳೆಯರೇ,

ನಿಮಗೆಲ್ಲ ನಾನು ಈಗಾಗಲೇ ತಿಳಿಸಿದ್ದಂತೆ ನವೆಂಬರ್ 26ರಂದು ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಮ್ಮ 3K ಸಮುದಾಯದ ಮೊದಲ ಕವನ ಸಂಕಲನ - "ಭಾವಸಿಂಚನ" ಪುಸ್ತಕದ ಬಿಡುಗಡೆ ಕಾರ್ಯಕ್ರಮವಿತ್ತು. ನಿಮ್ಮೆಲ್ಲರ ಶುಭ ಹಾರೈಕೆಗಳಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಸಂಭ್ರಮದಲ್ಲಿ ಭಾಗಿಯಾದವರಿಗೂ, ದೂರವೇ ಉಳಿದು ನಮ್ಮನ್ನು ಹಾರೈಸಿದವರಿಗೂ ಅನಂತಾನಂತ ಧನ್ಯವಾದಗಳು. ಅಂದಿನ ಸವಿ ಸವಿ ಕ್ಷಣಗಳ ಒಂದು ನೋಟ ಇಲ್ಲಿದೆ....

ನಮ್ಮ 3K ತಂಡ ಅಂದು ಅತ್ಯಂತ ಉತ್ಸಾಹಭರಿತವಾಗಿತ್ತು

ಕವಿಗಳಲ್ಲದವರ ಕವನಸಂಕಲನ..
ಭಾವಸಿಂಚನ..
ಬಿಡುಗಡೆಯ ಆ ದಿನ..
ಎಲ್ಲರಿಗೂ ರೋಮಾಂಚನ..


ಅಂದು ಬೆಳಗಿನಿಂದಲೇ ಸಮಾರಂಭದ Bannerಗಳು ಸುತ್ತಮುತ್ತಲಿನ ಜನರ ಗಮನ ಸೆಳೆದಿತ್ತು


ಬಂದ ಅತಿಥಿಗಳಿಗೂ, ಸಮುದಾಯದ ಪ್ರತಿ ಸದಸ್ಯರಿಗೂ ವಿತರಿಸಲಾದ ಸುಂದರ ಸ್ಮರಣಿಕೆಗಳು


UTV Motion Pictures, Director ತೇಜು ಶಿಶಿರವರು ಸಹ ನಮ್ಮ ಸಮುದಾಯದ ಸದಸ್ಯರು. ಅವರು ಆಗಮಿಸಿದ್ದು ನಮಗೆಲ್ಲಾ ಬಹಳ ಸಂತಸ ತಂದಿತು


ನಮ್ಮ 3K ಸಮುದಾಯದ ಸದಸ್ಯರ ದಂಡು!


ನಮ್ಮೆಲ್ಲರ ಪ್ರೀತಿಯ "ಪಕ್ಕು ಮಾಮ" ಪ್ರಕಾಶ್ ಹೆಗಡೆ ಅಲ್ಲಿ Center of attraction ಆಗಿದ್ದರು! ದುಂಡಿ ರಾಜ್‍ರವರನ್ನು ತಲುಪುವಲ್ಲಿ ನೆರವಾದ ಅವರಿಗೆ ಹೃತ್ಪೂರ್ವಕ ವಂದನೆಗಳು.


ರುಚಿಕಟ್ಟಾದ ಲಘು ಉಪಾಹಾರ, ಬಾದಾಮಿ ಹಾಲು....


ಕಾರ್ಯಕ್ರಮದ ಆರಂಭ ಕುಮಾರಿ ಭೂಮಿಕಾರವರ ಮಧುರ ಕಂಠದ ಗಾಯನದೊಂದಿಗೆ...


ನಂತರ ನಮ್ಮ ನಿಮ್ಮೆಲ್ಲರ ಸ್ನೇಹ ಲೋಕದ ಗೆಳೆಯ ಅಶೋಕ್ ವಿ ಶೆಟ್ಟಿ ಅವರಿಂದ ಸ್ವಾಗತ ಭಾಷಣ.


ಅನುಪಮಾ ಹೆಗಡೆಯವರು ಕವಿರಾಜ್‍ರವರ ಜನಪ್ರಿಯ ಗೀತೆಗಳಲ್ಲಿ ಒಂದಾದ "ಗಗನವೇ ಬಾಗಿ.." ಹಾಡನ್ನು ಹಾಡಿ ಎಲ್ಲರನ್ನು ಸ್ವಾಗತಿಸಿದ ರೀತಿ ಮನ ಸೆಳೆಯಿತು... ನಂತರ ಪ್ರೇಕ್ಷಕಕರಿಗೆ ನಮ್ಮ ಸಂಘದ ಬಗ್ಗೆ ತಿಳಿಸಲು ಸಹ ಒಂದು ಕವನವನ್ನೇ ಆರಿಸಿಕೊಂಡರು..


ಸಜ್ಜನರ ಸ್ನೇಹ ಸವಿಯುವುದಕೆ,
ಸಹೃದಯರ ಕಾವ್ಯ ಸ್ಮರಿಸುವುದಕೆ,
ಭಾವಜೀವಿಗಳ ಬಾಂಧವ್ಯ ಬೆಳೆಸುವುದಕೆ,

ಬನ್ನಿ,
ಕಾವ್ಯಲೋಕದ ಎಳೆಪೈರುಗಳು ಚಿಗುರುವ ಹೊಲಕೆ,
ಕೆಸರಲ್ಲೂ ಕಾವ್ಯಕಮಲಗಳು ಅರಳುವ ಕೊಳಕೆ,
ಹೆಮ್ಮರವಾಗಿ ಬೆಳೆವುದಿಲ್ಲಿ ನಿಮ್ಮ ಕಾವ್ಯಾಸಕ್ತಿಯ ಮೊಳಕೆ,
ಬಾಳ ಕತ್ತಲೆಯನ್ನೂ ಬೆಳಗುವುದಿಲ್ಲಿ ಕಾವ್ಯಾಮೃತದ ಬೆಳಕೇ!

ಸ್ವಾಗತಿಸುವೆವು ಎಲ್ಲರ ನಮ್ಮ ಮುಕ್ತ ಸಮುದಾಯಕೆ,
ಸಂಭ್ರಮದ ಈ ದಿನ, ನಮ್ಮೆಲ್ಲರದೊಂದೇ ಹಾರೈಕೆ,
ಉದಯವಾಗಲಿ ನಮ್ಮ ಚೆಲುವ ಸಮುದಾಯ - 3K!



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಲೇಖಕರಾದ ಶ್ರೀ ಮಂಜುನಾಥ್ ಕೊಳ್ಳೇಗಾಲ, ಕನ್ನಡ ಸಿನಿಮಾ ಲೋಕದ ಜನಪ್ರಿಯ ಸಂಗೀತ ಸಾಹಿತಿ ಶೀ ಕವಿರಾಜ್ ಹಾಗು ಜನಪ್ರಿಯ ಹಾಸ್ಯ ಸಾಹಿತಿ ಶ್ರೀ ದುಂಡಿರಾಜ್ರವರು ಉಪಸ್ತಿಥರಿದ್ದರು. ಅವರ ಜೊತೆಯಲ್ಲಿ ನಮ್ಮ ಸಮುದಾಯದ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್.


ಯಾವ ಜನುಮದ ಮೈತ್ರಿ?
ಪ್ರೇಕ್ಷಕರಿಗೆ ಅತಿಥಿಗಳ ಪರಿಚಯ ಮಾಡಿಸುವ ಸಂದರ್ಭದಲ್ಲಿ ಸಮುದಾಯದ ಇಬ್ಬರೇ ಮಹಿಳಾ ಸದಸ್ಯರಾದ ರೂಪಾ ಸತೀಶ್ ಹಾಗು ಅನುಪಮಾ ಹೆಗಡೆಯವರು ತಬ್ಬಿ ಖುಷಿ ಹಂಚಿಕೊಂಡರು


ಅತಿಥಿಗಳಿಂದ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಸಾಂಪ್ರದಾಯಿಕ ಪ್ರಾರಂಭ ಕಂಡಿತು.



ಬೆಳಗುತಿರಲಿ ಹೀಗೇ ನಮ್ಮ 3K ಜ್ಯೋತಿ
ಬೆಳೆಯುತಿರಲಿ ಹೀಗೇ ಸಮುದಾಯದ ಖ್ಯಾತಿ
ಹೆಚ್ಚುತಿರಲಿ ದಿನ ದಿನವೂ ಸದಸ್ಯರ ಗಣತಿ
ನಮ್ಮೊಂದಿಗೆ ಕೈ ಜೋಡಿಸಲು ನಿಮ್ಮಲ್ಲಿ ವಿನಂತಿ

ಅಂದು ತಾರೀಖು 26/11/2011... ಅದು 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ನಡೆದ ದಿನ(26/11). ಹಲವು ಜನ ಸೇನೆಯವರು ನೂರಾರು ಜನ ಅಮಾಯಕರು ಬಲಿ ತೆಗೆದುಕೊಂಡ ಒಂದು ಹೀನ ಕೃತ್ಯ ನಡೆದ ಕರಾಳ ದಿನ. ಆ ದಿನ ಹುತಾತ್ಮರಾದವರ ನೆನಪಿನಲ್ಲಿ ಎಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿದರು.


ಅನುಪಮಾರವರ ಸರಳ ಭಾಷೆಯ ಭಾಷಣದಲ್ಲಿ ನಿರಾಳ ಭಾವನೆಗಳು ವ್ಯಕ್ತವಾಗಿ ಎಲ್ಲರ ಗಮನ ಸೆಳೆಯಿತು.


"ಭಾವಸಿಂಚನ" ಬಿಡುಗಡೆಯ ಅಂತಿಮ ಘಟ್ಟದಲ್ಲಿ.. ಎಲ್ಲರ ಮುಖದಲ್ಲಿ ಸಂತಸದ ಸಿಂಚನ!


ಕೊನೆಗೂ ಬಂತು ನಮ್ಮದೆಂಬ ಒಂದು ಪುಸ್ತಕ!


ಅತಿಥಿಗಳ ಕೈಯಲ್ಲಿ ರಾರಾಜಿಸುತ್ತಿರುವ ಭಾವಸಿಂಚನದ ಮೊದಲ ಪ್ರತಿಗಳು


ಇದು ನಮ್ಮ ಚೊಚ್ಚಲ ಪ್ರಯತ್ನ. ಆದ್ದರಿಂದ ಅದಕ್ಕೆ ಬೆಲೆ ಕಟ್ಟಲು ನಮಗೆ ಇಷ್ಟವಾಗಲಿಲ್ಲ. ಇದು ಕನ್ನಡವನ್ನು ಬೆಳೆಸಿ ಪೋಷಿಸುವ ಎಲ್ಲರಿಗೂ ನಮ್ಮ ಕೊಡುಗೆ. ಅಂದರೆ ಇದು ಉಚಿತ. ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಪುಸ್ತಕದ ಒಂದು ಪ್ರತಿಯನ್ನು ಹಂಚಲಾಯಿತು.


ರವಿ ಕಾಣದ್ದನ್ನು ಕವಿ ಕಂಡ ಎನ್ನುತ್ತಾರೆ... ನಿಜ.. ಎಷ್ಟು ಕಲ್ಪನಾಶಕ್ತಿಯನ್ನು ಹೊಂದಿವೆ ಈ ಕವಿಗಳ ಕಣ್ಣುಗಳು.. ಕಾಣದ್ದನೂ ಕಂಡು ಬಿಡುತ್ತವೆ. ಆದರೆ ಭೂಮಿಯ ಮೇಲೆ ಇರುವುದನ್ನೂ ಕಾಣಲಾಗದ ಎಷ್ಟೋ ಜನರು ಇಂದು ನಮ್ಮ ಸುತ್ತ ಇದ್ದಾರೆ. ಅಂಥವರ ಬಾಳನ್ನು ಬೆಳಗುವ ಕೆಲಸವನ್ನು ಏಕೆ ಈ ಕವಿಗಳ ಕಣ್ಣುಗಳು ಮಾಡಬಾರದು? ನೇತ್ರದಾನ ನಮ್ಮೆಲ್ಲರ ಆಶಯವಾಗಿತ್ತು. ಎಲ್ಲರಿಗೂ ನೇತ್ರದಾನದ ಅರ್ಜಿಯೊಂದನ್ನೂ ವಿತರಿಸಲಾಯಿತು. ಇಚ್ಛೆಯಿರುವವರು ಅರ್ಜಿ ಭರ್ತಿ ಮಾಡಿ ಕೊಟ್ಟರು. ಅದನ್ನು ಸಂಬಂಧಪಟ್ಟ ಇಲಾಖೆಯವರಿಗೆ ಹಸ್ತಾಂತರಿಸಲಾಯಿತು.

ಮಂಜುನಾಥ್ ಕೊಳ್ಳೇಗಾಲರವರು ಕವನ ಸಂಕಲದೊಳಗಿನ ಒಂದೆರಡು ಕವನಗಳ ವಿಮರ್ಶೆಯೊಂದಿಗೆ ಭಾಷಣದ ಮೂಲಕ ಮನ ತಣಿಸಿದರು



"ಅಪ್ಪಾ.. ಈ ಪುಸ್ತಕ ನನಗೇ ಇರಲಿ" ಎನ್ನುತ್ತಿರುವಂತಿದೆ ನಮ್ಮ ಅಶೋಕರ ಮಗಳು ಖುಶಿ



"ಅಯ್ಯೋ ಫೋಟೋ ತೆಗೆದದ್ದು ಸಾಕು.. ನಾನಿನ್ನು ಕವನ ಓದ್ಬೇಕು ಹೋಗೀಪ್ಪಾ"
ಕವನ ಅರ್ಥವಾಗದಿದ್ದರೂ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಲಾದರು ಪುಸ್ತಕ ಖುಶಿಗೆ ಉಪಯೋಗವಾಯಿತು!


ಕವಿರಾಜ್‍ರವರ ಭಾಷಣದಲ್ಲಿ ಪ್ರೇಕ್ಷಕರೆಲ್ಲರೂ ತಲ್ಲೀನರಾದರು


ದುಂಡಿರಾಜ್‍ರವರು ತಾವೇ ಹೇಳಿದಂತೆ ತಮ್ಮ ಅತ್ಯಂತ ಗಂಭೀರ ಭಾಷಣ ನೀಡಿದರು. ಕಾರಣ ಈ ಪುಸ್ತಕದಲ್ಲಿರುವುದು ಹೆಚ್ಚಿನವು "Heavy Matter" ಎಂದರು.. ಪ್ರೇಕ್ಷಕರಲ್ಲಿ ನಗೆ ಮೂಡಿತು!


ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಈ ಗುಲಾಬಿ ಹೂವು ಬಾಗಿಲಲ್ಲೇ ನಿಂತು ಬರುವವರನ್ನೆಲ್ಲಾ ನಗು ನಗುತ್ತಾ ಬರಮಾಡಿಕೊಳ್ಳುತ್ತಿತ್ತು


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ರೂಪಕ್ಕರವರಿಗೆ ಅನುಪಮಾರವರು ಸನ್ಮಾನ ಮಾಡಿದ ರೀತಿ ಎಲ್ಲರ ಗಮನ ಸೆಳೆಯಿತು.. ಅನುಪಮಾರವರು ಶಾಲನ್ನು ಗೊಂಬೆಗೆ ಸುತ್ತಿದಂತೆ ಸುತ್ತಿದಾಗ ಎಲ್ಲರಲ್ಲೂ ನಗೆ ಮೂಡಿತು.


ನಂತರ ರೂಪಕ್ಕನವರಿಗೆ ಶಾಲು ಹೊದ್ದಿಸುವ ಸರದಿ...


ಅತಿಥಿಗಳಿಂದ 3K ಬಳಗದ ಸದಸ್ಯರೆಲ್ಲರಿಗೂ ಶಾಲು, ಸ್ಮರಣಿಕೆ ವಿತರಣೆ


ಕೊನೆಗೆ ಕಾರ್ಯಕ್ರಮಕ್ಕೆ ನೆರವಾದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸುವ ಹೊಣೆ ನನ್ನದಾಯಿತು...


ಭರತ್ ಆರ್ ಭಟ್ ಅವರು ಬರೆದುಕೊಟ್ಟ ಚೀಟಿಯನ್ನು ಹೇಗೋ ತಪ್ಪಿಲ್ಲದೇ ಓದಿಬಿಟ್ಟೆ..
ಆದರೂ ಅದರಲ್ಲಿ ನಮ್ಮ ಪ್ರಕಾಶ್ ಹೆಗಡೆಯವರ ಹೆಸರೇ ಬಿಟ್ಟುಹೋಯ್ತಲ್ಲಾ ಎಂಬ ಕೊರಗು..
ಆರಂಭ ಗೀತೆ ಹಾಡಿದ ಭೂಮಿಕರವರ ಹೆಸರು ಸಹ ತಪ್ಪಿ ಹೊಯ್ತು.. ಕ್ಷಮಿಸಿ


ಸವಿ ಸವಿ ನೆನಪುಗಳು...
====================

3K ಬಳಗ


ಕನ್ನಡ ಹೆಸರಾಂತ ಸಂಗೀತ ಸಾಹಿತಿ ಕವಿರಾಜ್‍ರವರೊಂದಿಗೆ


ಅನಿಲ್ ಬೆಡಗೆ, ಆಶಾ ಪ್ರಕಾಶ್, ಪ್ರಕಾಶ್ ಹೆಗಡೆ ಹಾಗು ದುಂಡಿ ರಾಜ್ ಅವರೊಂದಿಗೆ

30 ತಿಂಗಳಲ್ಲಿ 25,000 ಪ್ರತಿಗಳು ಮಾರಾಟವಾಗಿ ದಾಖಲೆ ಸೃಷ್ಟಿಸಿದ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕದ ಲೇಖಕ, ವಿಜಯಕರ್ನಾಟಕ ದಿನಪತ್ರಿಕೆಯ ಉಪಸಂಪಾದಕರು ಆದ ಎ. ಆರ್. ಮಣಿಕಾಂತ್ ಅವರೊಂದಿಗೆ


ದೊಡ್ಡಮನಿ ಮಂಜುನಾಥ್, ವೆಂಕಟೇಶ್ ಹೆಗಡೆ ಹಾಗು ಭರತ್‍ರವರೊಂದಿಗೆ..

ಗೆಳೆಯರೇ,

ಸಪ್ನ ಪುಸ್ತಕ ಮಳಿಗೆಯಲ್ಲಿ ಯಾವುದೇ ಕನ್ನಡ ಪುಸ್ತಕ ಕೊಂಡರೂ ಅದರೊಂದಿಗೆ ಭಾವಸಿಂಚನ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು.
ನಿಮಗೆ ಈ ಪುಸ್ತಕದ ಒಂದು ಪ್ರತಿ ಬೇಕಾದಲ್ಲಿ ನನಗೆ ನಿಮ್ಮ ವಿಳಾಸವನ್ನು ಈ-ಮೇಲ್ ಮೂಲಕ ಕಳುಹಿಸಿ. ಪುಸ್ತಕವನ್ನು ನೀಡಿದ ವಿಳಾಸಕ್ಕೆ Courier ಮುಖಾಂತರ ಕಳುಹಿಸಲಾಗುವುದು. ಇದು ಸಂಪೂರ್ಣ ಉಚಿತ.
ಈ-ಮೇಲ್ ಕಳುಹಿಸಬೇಕಾದ ವಿಳಾಸ:
pradeepha22@gmail.com



Friday, November 11, 2011

"ಭಾವಸಿಂಚನ" - ಪುಸ್ತಕ ಬಿಡುಗಡೆ ಸಮಾರಂಭ - ಆಹ್ವಾನ




ಗೆಳೆಯರೇ,

3K ಎಂಬುದು ಬಹಳ ವರ್ಷಗಳಿಂದ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಒಂದು ಸಮುದಾಯ. ಪ್ರಖ್ಯಾತ ಅಂತರ್ಜಾಲ ತಾಣವಾದ ಆರ್ಕೂಟ್‍ನಲ್ಲಿ ಜನಿಸಿದ ಈ ಸಮುದಾಯ ಈಗ ತನ್ನದೇ ರೂಪ ಪಡೆಯುತ್ತಿದೆ. ನಾನು ನನ್ನ ಮೊದಲ ಸಾಲುಗಳನ್ನು ಕವನ ಎಂದು ಬಗೆದು ಗೀಚಲು ಶುರುಮಾಡಿದಾಗಿನಿಂದಲೂ ನನ್ನನು ಪ್ರೋತ್ಸಾಹಿಸಿ ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುವಂತೆ ಮಾಡಿದ್ದು ನಮ್ಮ 3K.

ಕಳೆದ ಮೂರು ವರ್ಷಗಳಿಂದ ಸಮುದಾಯ ಕಂಡ ಅತ್ಯುತ್ತಮ ಕವನಗಳನ್ನು ಒಂದು ಕವನ ಸಂಕಲನವಾಗಿ ಹೊರತರುತ್ತಿದ್ದೇವೆ.

ಇದೇ ತಿಂಗಳ 26ನೇ ತಾರೀಖು ನಮ್ಮ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದೇವೆ

Kannada Sahitya Parishat
Chamarajpet, Bangalore

November 26th, 2011, Saturday,
Evening 6 PM

ದಯವಿಟ್ಟು ಎಲ್ಲರೂ ಬಂದು ನಮ್ಮ ಸಮುದಾಯವನ್ನು ಹಾರೈಸಬೇಕಾಗಿ ವಿನಂತಿ.

ಬನ್ನಿ, ಮತ್ತೊಮ್ಮೆ ಎಲ್ಲರೂ ಭೇಟಿಯಾಗೋಣ. ನಿಮ್ಮೆಲ್ಲರೊಡನೆ ಬೆರೆತು ಬಹಳ ದಿನವಾಯ್ತು...

ಧನ್ಯವಾದಗಳು

Tuesday, August 23, 2011

ದೇಶಕ್ಕೆ ಎರಡನೇ ಸ್ವಾತಂತ್ರ್ಯ ಚಳುವಳಿ!





"ದೇಶದಲ್ಲಿ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ..

ಅಲ್ಲಿ ಮಹಾತ್ಮನೊಬ್ಬ ಉಪವಸ ಸತ್ಯಾಗ್ರಹ ಕುಳಿತಿದ್ದಾನೆ..

ಲಕ್ಷ ಲಕ್ಷ ಮಂದಿ ಅವರಿಂದ ಪ್ರಭಾವಿತರಾಗಿ ತಾವೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ..

ಜನರು ತಮ್ಮ ತಮ್ಮ ಕೆಲಸ ಕಾರ್ಯ ಬಿಟ್ಟು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ..

ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲೆ ಕಾಲೇಜು ಬಿಟ್ಟು ಹೋರಾಟಕ್ಕೆ ಇಳಿಯುತ್ತಿದ್ದಾರೆ.."

ಇವು ನಾವು ಶಾಲಾ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಓದಿದ್ದ ಸಾಲುಗಳು!

ಎಷ್ಟು ಕಾಕತಾಳೀಯವೆಂದರೆ, ಇಂದು ಅಂಥದ್ದೇ ಹೋರಾಟವನ್ನು ಮತ್ತೆ ನೋಡುತ್ತಿದ್ದೇವೆ!

ಇಂದು ಮಹಾತ್ಮ ಗಾಂಧಿಯ ಸ್ಥಾನದಲ್ಲಿ ಅವರ ಅನುಯಾಯಿ ಅಣ್ಣಾ ಹಜ಼ಾರೆಯವರು ದೇಶವನ್ನು ಮುನ್ನಡೆಸುತ್ತಿದ್ದಾರೆ..

ಸ್ವಾತಂತ್ರ್ಯದ ನಂತರ ಇಷ್ಟು ಒಗಟ್ಟಿನಿಂದ ದೇಶವಿಡೀ ಪ್ರತಿಭಟನೆ ನಡೆದಿರುವುದು ನಾನು ಇದೇ ಮೊದಲು ನೋಡುತ್ತಿರುವುದು!

ಇದು ನಿಜವಾಗಿಯೂ ದೇಶದ ಎರಡನೇ ಸ್ವಾತಂತ್ರ್ಯ ಹೋರಾಟವೇ ಸರಿ!

ಅಂದು ಬ್ರಿಟೀಷರ ವಿರುದ್ಧ ಹೋರಾಡಿದೆವು, ಇಂದು ಭ್ರಷ್ಟರ ವಿರುದ್ಧ ಹೋರಾಡಬೇಕಿದೆ!

ಅಣ್ಣಾ ಹಜ಼ಾರೆಯವರು ಭ್ರಷ್ಟಾಚಾರರಹಿತ ಭಾರತದ ಮಹಾಪಿತರಾಗಲಿದ್ದಾರೆ!

ಆದರೆ ಈಗಾಗಲೇ ಎಂಟು ದಿನಗಳು ಕಳೆದಿವೆ.. ಅಣ್ಣಾರವರ ಆರೋಗ್ಯ ಹದಗೆಡುವ ಪರಿಸ್ಥಿತಿಯಲ್ಲಿದೆ..

ಅವರಿಗೆ ದೇವರು ಹೋರಾಡುವ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುವೆ..

ಹಾಗು ನಿಮ್ಮೆಲ್ಲರನ್ನೂ ಅಣ್ಣಾರವರಿಗೆ ಬೆಂಬಲ ನೀಡಲು ಬೇಡಿಕೊಳ್ಳುವೆ..

ಇಷ್ಟಕ್ಕೂ ನಾವೆಲ್ಲ ಇಷ್ಟು ಕಷ್ಟಪಟ್ಟು ಜೀವನ ನಡೆಸುವುದು ಏಕೆ?

ನಮ್ಮ ಹಾಗು ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿಯಲ್ಲವೆ?

ದೇಶಕ್ಕೆ ಉತ್ತಮ ಭವಿಷ್ಯವಿಲ್ಲದಿದ್ದರೆ ಇನ್ನು ನಮಗೆಲ್ಲಿ ಉತ್ತಮ ಭವಿಷ್ಯ?

ಬನ್ನಿ ನಮ್ಮ ದೇಶವನ್ನು ಭವಿಷ್ಯದಲ್ಲಾದರೂ ಭ್ರಷ್ಟಾಚಾರರಹಿತ ಬಲಿಷ್ಠ ರಾಷ್ಟ್ರವನ್ನಾಗಿ ಮಾಡೋಣ..

ನನ್ನ ಕೆಲಸ ಕಾರ್ಯಗಳನ್ನು ಪಕ್ಕಕ್ಕೆ ಇಟ್ಟು ನಾಳೆ ನಾನೂ ಹೋರಾಟದಲ್ಲಿ ಪಾಲ್ಗೊಳ್ಳುತಿರುವೆ..

ನೀವೂ ಬರುವಿರಿ ತಾನೆ.. ತಪ್ಪದೆ ಬನ್ನಿ ದೇಶದ ಉಜ್ವಲ ಭವಿಷ್ಯ ನಿಮ್ಮೆಲ್ಲರ ಹಾದಿ ಕಾಯುತ್ತಿದೆ..

ಜೈ ಹಿಂದ್!

One of the SMSes I recieved read:
Anna Hazare says bring back the black money.Do you know what will happen if Rs.1456 lakh crore comes back....
1. India becomes financially no.1.
2. Each district will get Rs.6000 crores & 1 village will get 100 crores.
3. No need to pay taxes for next 20 yrs.
4. petrol- Rs.25/-; Diesel- Rs. 15/-; Milk- Rs.8/-
5. No need to pay electricity bill.
6. Indian borders will become stronger than China wall.
7. 1500 Universities like Oxford can be opened.
8. 28000 kms. rubber road (like in Paris) can be made,
9. 2000 hospitals with all facilities & medicines free.
10. 95 crores people will have their own house.

Indians Dream!

Thursday, July 21, 2011

ಪಯಣಕ್ಕೊಂದು Short Break!


"ಕಾಫ಼ಿ, ತಿಂಡಿಗೆ ಹತ್ತು ನಿಮಿಷ ಟೈಮಿದೆ ನೋಡಿ..."

ಹೀಗೆ ದೂರದ ಬಸ್ ಪ್ರಯಾಣಗಳಲ್ಲಿ ಕೂಗುವುದುಂಟು. ಹಾಗೇ ಇಂದು ನಾನೂ ಕೂಗುತ್ತಿದ್ದೇನೆ.. ಈ "ಪ್ರೇಮ ಕವಿಯ ಪಯಣ" ನಿಮ್ಮೆಲ್ಲರ ಪ್ರೋತ್ಸಾಹದಿಂದ ಬಹಳ ದೂರ ಬಂದಾಗಿದೆ, ಹಾಗೆಯೇ ಇನ್ನು ಬಹಳ ದೂರ ಸಾಗುವುದಿದೆ.. ಪಯಣದ ಜೊತೆಗಾರರಾದ ನಿಮ್ಮೆಲ್ಲರಿಗೂ ಆಯಾಸವಾಗಿರಬಹುದು! ಇನ್ನು ಕೆಲ ತಿಂಗಳವರೆಗೆ ನಿಮ್ಮೆಲರಿಗೂ ಸುಧಾರಿಸಿಕೊಳ್ಳಲು ಸಮಯ ಕೊಡಬೇಕೆಂದಿದ್ದೇನೆ.

ಇನ್ನು ಪಯಣಕ್ಕೆ ಒಂದು Short Break!

ವೃತ್ತಿಯಲ್ಲಿ ಹೊಸ ಹೊಸ ಜವಾಬ್ದಾರಿಗಳು ತಲೆಯ ಮೇಲೆ ಬಿದ್ದಿರುವುದರಿಂದ ಸ್ವಲ್ಪ ಸಮಯ ಇತ್ತ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ. ಬರೆಯಲು ಸಮಯವಾಗದಿದ್ದರೂ ನಿಮ್ಮೆಲ್ಲರ ಬ್ಲಾಗುಗಳನ್ನೂ ನೋಡಲು ಪ್ರಯತ್ನಿಸುತ್ತೇನೆ. ಆದಷ್ಟು ಬೇಗನೆ ಮತ್ತೆ ಮರಳಿ ಬರಲು ಪ್ರಯತ್ನಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಹೀಗೆ ಎಂದೂ ಇರಲಿ ಆಶಿಸುವೆ. ಧನ್ಯವಾದಗಳು!

Miss you all friends!

Keep in touch :)

************************************************

Tuesday, July 12, 2011

ಹುಸಿ ಪ್ರೇಮದ ಪಾಶ





ಗುರುಪ್ರಸಾದ್ ಶೃಂಗೇರಿಯವರು ತೆಗೆದ ಈ ಸುಂದರ ಚಿತ್ರದಿಂದ ಪ್ರೇರಿತವಾದ ನನ್ನ ಒಂದು ಕವನ...


ಹುಸಿ ಪ್ರೇಮದ ಪಾಶ
--------------------

ಮಲಗಿದ್ದ ಮುಗ್ಧ ಮೊಗ್ಗಿನ ಮನಸ್ಸು

ಕಣ್ಮುಚ್ಚಿ ಕಾಣುತಿತ್ತು ನಲ್ಲನ ಕನಸು

ರಂಗೇರಿತ್ತು ಬಣ್ಣ, ಅರಳುವ ಮುನ್ನ,

ಇನ್ನು ಅರಳಿದರೆಷ್ಟು ಸೊಗಸು!



ಎಳೆ ಪಕಳೆಗಾಯಿತು ಅಙ್ಞಾತ ಪಾದ ಸ್ಪರ್ಶ

ಹೂವಿಗೋ ಇನಿಯ ದುಂಬಿ ಬಂದನೆಂಬ ಹರುಷ

ಮಾಡುತಿರಲು ತುಳಿಯುತ ಆ ಪಾದಗಳು ನರ್ತನ

ಹೂವಿನೊಳು ಮಧು ಸುಗಂಧಗಳ ಸ್ಪಂಧನ



ಎಳೆ ಎಲೆಗಳ ಮೇಲೆ ಎಳೆದನು

ಟೊಳ್ಳು ಭಾವನೆಗಳ ಎಳೆ ಎಳೆಯ

ಕಥೆಗೊಂದು ಕಥೆ ಪೋಣಿಸಿ

ಹೆಣೆದ ಮೋಸದ ಬಲೆಯ



ಕಳೆದು ಮಧುರಾತ್ರಿ ಎಚ್ಚರವಾಗಲು ಮುಂಜಾನೆ

ಕಣ್ಣ ತೆರೆದು ಅರಳಲು ಮೊಗ್ಗು ಮೆಲ್ಲನೆ

ಕಂಡಿದ್ದು ನಗುತಿದ್ದ ವಿಶಾಲ ಖಾಲಿ ಆಕಾಶ

ಹಾಗು ತಾನು ಸೆರೆಯಾಗಿದ್ದ ಹುಸಿ ಪ್ರೇಮದ ಪಾಶ!

Photo Courtesy - img.moonbuggy.org
-----------------------------------------

ದುಂಬಿಯ ನಿರೀಕ್ಷೆಯಲಿದ್ದವಳ

ಮರಳು ಮಾಡಿದವ ವಿಷ ಜೇಡ!

ಅರಿಯಿರಿ ಅರಳುವ ಹೂಗಳೇ...

ಹುಸಿ ಆಸೆಗೆಂದೂ ದುಡುಕು ಬೇಡ.


Wednesday, July 6, 2011

My Clicks: ಮುತ್ತಿನ ಮಳೆಹನಿ




ಮೊದಲ ಮಳೆಯ ಸುವಾಸನೆ ಹರಡಿದೆ ಎಲ್ಲೆಲ್ಲೂ
ಮೊದಲ ಚುಂಬನದ ಪುಳಕಕೆ ಮೂಡಿದೆ ಕಾಮನಬಿಲ್ಲು!

ಬಿಸಿಲಿಗೆ ಬಿರಿದು ಬಯ್ಬಿಟ್ಟಿತ್ತು ಭೂಮಿ
ಇನಿದನಿಯ ಕೇಳಿ ಮೋಡವೂ ಆಯಿತು ಪ್ರೇಮಿ
ತನ್ನಿಯನ ಸ್ಪರ್ಶವ ಬೇಡಲು ಆ ದನಿ
ಮೋಡವು ಮುಟ್ಟಲು ನಾಚಿ...
ಉದುರಿಸಿತು ಮುತ್ತಿನ ಮಳೆಹನಿ!

Tuesday, June 28, 2011

My Clicks: An Engagement Ring


ಗೆಳೆಯನೊಬ್ಬನ ನಿಶ್ಚಿತಾರ್ಥದಲ್ಲಿ ನಾ ತೆಗೆದ ಚಿತ್ರ ಹಾಗು ಅದರ ಮೇಲೊಂದು ಕವನ.

.........................................................


ಉಂಗುರ
======

ಕಂಡಿರಲಿಲ್ಲ ನಾ ಪ್ರೀತಿ ಪ್ರೇಮದ ಗಾಳಿ ಗಂಧ
ಕಂಡಿರಲಿಲ್ಲ ಎಂದೂ ಇಂಥ ಸುಮಧುರ ಸಂಬಂಧ

ಎದುರಿಗಿದ್ದ ಒಲವ ಕಾಣದ ಈ ಅಂಧನ
ಬೆರಳಿಗೆ ಬಿತ್ತಿಂದು ಈ ಉಂಗುರದ ಬಂಧನ

ಬಾಳ ಬೆಳಗುವುದಿನ್ನು ಹೊಳೆಯುವ ಈ ಉಂಗುರ
ಹೊಸ ಅರ್ಥವ ಪಡೆಯುವುದಿನ್ನು ಅವಳ ಹಣೆಯ ಸಿಂಧೂರ

ಮೊಗ್ಗೊಂದು ಅರಳಿ ಹೊಸ ಜಗವ ಕಂಡಂತೆ
ಅರಳಿಹುದು ಮನ ದೊರೆತಿರಲು ಹೊಸ ಜೊತೆ

ಎಂದೋ ಕಂಡ ಕನಸುಗಳ ಹೇಳಿ ಅವಳ ನಗಿಸುವ ತವಕ
ಅವಳೆಂದಳು "ನೋಡುತಿಹರೆಲ್ಲರೂ ಸುಮ್ಮನಿರಿ, ಸಂಜೆಯ ತನಕ!"

================================================================
© Pradeep Rao

Wednesday, June 22, 2011

ಒಂದು ಹಡಗಿನ ಕಥೆ

ಸುಮಾರು ಒಂದು ವರ್ಷದ ಕೆಳಗೆ ಗೀಚಿದ್ದ ಕೆಲವು ಸಾಲುಗಳು.. ಇಂದು ಏಕೋ ಮತ್ತೆ ನೆನಪಾಯ್ತು.. ಹಳೇ ಬುಕ್ಕು, ಕಾಗದಗಳ ನಡುವೆ ಇದನ್ನು ಹುಡುಕಿ ತೆಗೆದು ಹಾಕಿರುವೆ. ವಿಳಂಬವಾಗಿದೆ.. ಲಂಬವಾಗಿಯೂ ಇದೆ.. ತಾಳ್ಮೆಯಿಂದ ಓದಬೇಕಾಗಿ ವಿನಂತಿ!
....................................................................................


ಈ ಲೋಕ ಒಂದು ವಿಶಾಲ ಸಾಗರ, ಬದುಕು ಅದರ ಮೇಲೆ ಮುಳುಗುವ ಭಯದಲ್ಲಿ ನಿತ್ಯ ಸಾಗುವ ಪಯಣ. ಈ ಪಯಣಕ್ಕೆ ಬಳಸುವ ಹಡಗುಗಳು ಜೀವನದ ವಿಧ ವಿಧ ಹಂತಗಳ ಸಂಕೇತ. ಜೀವನದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ತಲುಪಲು ಎಲ್ಲರೂ ಬೇರೆ ಬೇರೆ ಹಡಗುಗಳನ್ನು ಹಿಡಿದು, ಆಗಾಗ ಹಡಗುಗಳನ್ನು ಬದಲಿಸುತ್ತಾ ಸಾಗುತ್ತಿರುತ್ತಾರೆ. ಕೆಲವರು ಹಡಗು ಎಲ್ಲಿಂದ ಬಂದಿದೆ? ಎಲ್ಲಿ ತನಕ ಹೋಗುತ್ತದೆ? ಒಳಗೆ ಎಂಥವರು ಇದ್ದಾರೆ? ಎಂದು ಸಂಪೂರ್ಣ ಮಾಹಿತಿ ಪಡೆದೇ ಹಡಗನ್ನು ಹತ್ತುತ್ತಾರೆ. ಇನ್ನು ಕೆಲವರು ದಾರಿ ತಪ್ಪಿ ದಿಕ್ಕು ತೋಚದೇ ಸಿಕ್ಕ ಸಿಕ್ಕ ಹಡಗುಗಳನ್ನೆಲ್ಲ ಹತ್ತಿ ಗುರಿ ಸೇರುವ ಆಸೆಯಲ್ಲಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಅಲ್ಲಿಗೆ ಸುತ್ತಾಡುತ್ತಿರುತ್ತಾರೆ. ಬಾಳು ನಿತ್ಯ ಹಡಗುಗಳ ಹುಡುಕಾಟ!

ಒಂದಲ್ಲ ಒಂದು ಹಂತದಲ್ಲಿ ಅರಿತೋ ಅರಿವಿಲ್ಲದೆಯೋ ಮನಸು ತಾನಾಗಿಯೇ ಹತ್ತುವ ಹಡಗು, ಎಲ್ಲರೂ ಸದ್ದಿಲ್ಲದೆ ಮಾಡಿಯೇ ತೀರುವ ಪಯಣ... ಪ್ರೇಮದ ಪಯಣ! ಶಾಶ್ವತ ನೆಲೆಯ ಹುಡುಕಾಟದಲ್ಲಿರುವ ಇಂತಹ ಹಡಗಿನೊಂದಿಗೆ ಹುಡುಗಾಟವಾಡುತ್ತಾ, ದಾರಿ ತಪ್ಪಿಸಿ, ಹೊಂಚು ಹಾಕಿ, ಲೂಟಿ ಮಾಡುತ್ತಾ, Flirt ಮಾಡುವವರೇ..

ಕಡಲ್ಗಳ್ಳರು!

The Pirates of the Ocean!




ಬಾಳೆಂಬ ಕಡಲಲ್ಲಿ ನಾನು
ಹುಚ್ಚು ಮನಸ್ಸಿನ ಪ್ರೀತಿಯ ಅಲೆಗಳ
ಹೊಡೆತಕ್ಕೆ ಸಿಕ್ಕಿ ಮುಳುಗುತ್ತಿದ್ದ
ಹಳೇ ಹಡಗಿನ ನಾವಿಕ.

ವಿಧಿಯ ಚಂಡಮಾರುತಕ್ಕೆ ಸಿಕ್ಕಿ
ಎಂದೋ ಮುಳುಗಿಹೋದ
ಬಣ್ಣಬಣ್ಣದ ಕನಸಿನ ಲೋಕದ
ದೊಡ್ಡ ದೊಡ್ಡ ಹಡಗುಗಳ
ಚೂರು ಚೂರಾದ ಭಾಗಗಳ, ಭಾವಗಳ,
ಕಾಲ ಪಾತಾಳದ ತಳದಿಂದ ಹೆಕ್ಕಿ ಹೆಕ್ಕಿ
ಮನದ ನೆನಪುಗಳ ಸಂಗ್ರಹಾಲಯಕ್ಕೆ
ತಂದು ಬೆಚ್ಚಗೆ ಬಚ್ಚಿಟ್ಟುಕೊಳ್ಳುವುದೇ
ಈ ನಾವಿಕನ ಕಾಯಕ!

ಮನದ ಹಡಗಿನಲಿ ಕಹಿ ನೆನಪುಗಳು ಅಪಾರ
ತುಂಬಿ ಹೋಗಿ ಗುಡಾಣ, ತಡೆಯಲಾಗದಷ್ಟು ಭಾರ
ಮುಳುಗಿ ಹೋಗುತಿತ್ತು ಬಾಳ ಹಡಗು!
ಆದರೆ ಗುರಿಯಿನ್ನೂ ಬಹಳ ಬಹಳ ದೂರ

ಚಿಂತಿಸಿ ದಿಕ್ಕೇ ತೋಚದೆ ಕುಳಿತಿರಲು ಎಲ್ಲರೂ
ಬಂದರೆಲ್ಲಿಂದಲೋ ಭಯಾನಕ ಕಡಲ್ಗಳ್ಳರು!
ಮುಗ್ಧ ಮನಗಳ ಮೇಲೆ ಅವರ ಮಾತುಗಳ ದಾಳಿ
ಕೊಳ್ಳೆ ಹೊಡೆದರು... ಹಡಗೆಲ್ಲಾ ಖಾಲಿ!

ಬೇಡ ಬೇಡವೆಂದರೂ ಬಾಚಿದರು,
ದಯವೇ ತೋರದೆ ದೋಚಿದರು
ಕೇಳಲೇ ಇಲ್ಲ ನಾವೆಷ್ಟೇ ಅಂಗಲಾಚಿದರೂ
ಛೆ! ಅವರು ಅದೆಂಥಾ ಹುಚ್ಚರು!

ಮೂಟೆಗಳಲ್ಲಿ ಅವರು ಕದ್ದಿದ್ದು ಬರೀ ಕಹಿ ನೆನಪು!
ಮೂಢರು! ಅವರಿಗೆ ಅವೆಲ್ಲಾ
ರತ್ನ ವಜ್ರ ವೈಢುರ‍್ಯಗಳೇನೋ ಎಂಬ ಹುರುಪು!

ತುಂಬಿಕೊಂಡರೆಲ್ಲವ ತಮ್ಮ ಹಡಗಿಗೆ ಬಿಡದೆ
ಘನ ಮನಸ್ಸಿನ ಭಾವಗಳ ವಜಿ ತಡೆಯದೆ
ತಕ್ಷಣವೇ ಬಿರಿಯಿತು ಆ ಕಳ್ಳ ಹಡಗಿನ ಎದೆ!

ಆದದ್ದು ಆಗಲೆ ಆ ಕಳ್ಳರಿಗೆ ತಮ್ಮ ತಪ್ಪಿನ ಅರಿವು
ನೆನಪುಗಳ ನಾವೆಯ ನಾವಿಕನೂ ಅಂದು ಬೇಡಿದ್ದ ಮರೆವು



ಮರುಕ್ಷಣವೇ ಮಾತಿಲ್ಲದೆ ಮುಳುಗಿತಾ ಹಡಗು,
ಮನ ಹಗುರವಾಗಿ, ಹೊಸಜೀವ ಬಂದಂತೆ,
ಸಾಗಿದೆವು ನಾವು ಮತ್ತೆ ಅನಂತದವರೆಗೂ.

ಕೊನೆಗೆ ಮನದ ಹಡಗಿನ ಮೇಲೆ ಉಳಿದದ್ದು ಬರೀ ಆ ಕಡಲ್ಗಳ್ಳರು ಬಂದುಹೋದ ಹೆಜ್ಜೆಗುರುತುಗಳ ನೆನಪು!


====================================================
© Pradeep Rao
Photo courtesy - www.fotosearch.com
Photo courtesy - www.hydrolance.net