Thursday, November 6, 2014

Technical ಲವ್


ಬಹುರಾಷ್ಟ್ರೀಯ ಕಂಪನಿಯಲ್ಲಿ ನೆಟ್‍ವರ್ಕ್ ಇಂಜಿನಿಯರ್ ಆಗಿರುವ ನನಗೆ ಪ್ರತಿನಿತ್ಯ ಚಿತ್ರವಿಚಿತ್ರ ರೀತಿಯ ತಾಂತ್ರಿಕ ತೊಂದರೆಗಳ ಬಗ್ಗೆ ಪ್ರಪಂಚದ ಎಲ್ಲಾ ಮೂಲೆಗಳಿಂದ ಈಮೇಲ್‍ಗಳು ಬರುತ್ತಿರುತ್ತವೆ. ಆ ತಾಂತ್ರಿಕ ದೋಷಗಳಿಗೆಲ್ಲಾ ಪರಿಹಾರ ಸೂಚಿಸುವುದೇ ನಮ್ಮ ಕೆಲಸ. ಕೆಲವೊಮ್ಮೆ ನಮ್ಮ ಜವಾಬ್ದಾರಿಯ ಪರಿಧಿಯಿಂದ ಹೊರತಾದ ಸಮಸ್ಯೆಗಳ ಬಗ್ಗೆಯೂ ಸಲಹೆಗಳನ್ನು ಕೋರಿ ಹಲವರು ಈಮೇಲ್ ಕಳುಹಿಸುತ್ತಿರುತ್ತಾರೆ. ಅಂತಹ ಸಮಯದಲ್ಲಿ ನಯವಾಗಿ ಇದು ನಮಗೆ ಸಂಬಂಧಪಟ್ಟಿದ್ದಲ್ಲ. ದಯವಿಟ್ಟು ನೀವು ಇಂಥವರನ್ನು ಸಂಪರ್ಕಿಸಿ ಎಂದು ಅವರ ಕೋರಿಕೆಗನುಸಾರವಾಗಿ  redirect ಮಾಡಬೇಕಾಗುತ್ತದೆ. 2011ರ ಜಪಾನಿನ ಪ್ರಳಯ ಸದೃಶ ಸ್ಥಿತಿಯಲ್ಲಿ "ನಮ್ಮನ್ನು ರಕ್ಷಿಸಿ" ಎಂದು ಬಂದಂಥ ಹೃದಯ ವಿದ್ರಾವಕ ಕರೆ ಇಂದ ಹಿಡಿದು "ಸರ್ವರ್ ರೂಮಿನಲ್ಲಿ ಬೆಕ್ಕಿನ ಮರಿ ಸಿಕ್ಕಿಹಾಕಿಕೊಂಡಿದೆ. ತಾತ್ಕಾಲಿಕವಾಗಿ ಅದಕ್ಕೇ ಅಲ್ಲೇ ಏನಾದರೂ ಆಹಾರದ ವ್ಯವಸ್ಥೆ ಮಾಡಿ" ಎಂಬ ಹಾಸ್ಯಾಸ್ಪದ ಈಮೇಲ್‍ಗಳನ್ನು ನನ್ನ  Inboxನಲ್ಲಿ ಕಾಣಬಹುದು. ನೆನ್ನೆ ದಿನ ಇಂತಹುದೇ ಒಂದು ವಿಚಿತ್ರ ಈಮೇಲ್ ನನ್ನ ಇನ್‍ಬಾಕ್ಸಿಗೆ ಬಂದು ಬಿತ್ತು. ತೆಗೆದುನೊಡಿದರೆ ಅದರಲ್ಲಿ ಬರೆದಿತ್ತು...

"LOVER NOT RESPONDING. PLEASE HELP!!!"

Loverboy ಥರ ಫೋಸ್ ಕೊಡುತ್ತಿದ್ದ ದಿನಗಳು, ಲವ್‍ಗುರು ಆಗಿ ಗೆಳೆಯರ ಪ್ರೇಮ ಪ್ರಸಂಗಗಳು ಕುದುರುವಂಥ ಸಲಹೆಗಳನ್ನು ನೀಡುತ್ತಿದ್ದ ವೈಭವದ ಕಾಲೇಜು ದಿನಗಳು ಮುಗಿದು ವರ್ಷಗಳೇ ಕಳೆದಿವೆ. ಆದರೆ ಇವರು ಯಾರೋ ನನ್ನ ಅಂದಿನ ಸಾಮರ್ಥ್ಯವನ್ನು ಅರಿತು ಈಗ ಸಂದೇಶ ಕಳುಹಿಸುತ್ತಿದ್ದಾರಲ್ಲ ಎಂದು ಅಚ್ಚರಿಪಟ್ಟೆ. ಎಲ್ಲೋ ಏನೋ ಮಿಸ್ ಹೊಡೀತಾ ಇದೆ ಅಂತ ಅಂದುಕೊಂಡೆ. ಕೂಲಂಕುಶವಾಗಿ ಮೇಲ್‍ಅನ್ನು ಪರಿಶೀಲಿಸಿದಾಗ ವಿಷಯ ಅರ್ಥವಾಯಿತು. ನಗುವೂ ಬಂದಿತು. ತಕ್ಷಣ ಮೇಲ್ ಕಳುಹಿಸಿದ್ದ ನನ್ನ ಆಪ್ತಗೆಳೆಯ ಸಹೋದ್ಯೋಗಿ ನವೀನ್‍ಗೆ ಕರೆ ಮಾಡಿದೆ.

"ಗರ್ಲ್‍ಫ್ರೆಂಡ್ ಜೊತೆ ಜಗಳ ಆಡಿದ್ದೀಯ?" ವಿಚಾರಿಸಿದೆ

"ಈಗ್ಯಾಕೋ ಅವೆಲ್ಲ.. ನಮ್ದು ದಿನಾಗಲೂ ಜಗಳ ಇದ್ದಿದ್ದೇ" ಎಂದ

"ಏನಾಯ್ತು ಅಂತ ಸ್ವಲ್ಪಬಿಡಿಸಿ ಹೇಳೋ" ಎಂದೆ

"ನೆನ್ನೆ ನಾನೇನೋ ತಪ್ಪು ಮಾತಂದೆ. ಅದಕ್ಕವಳು ಮುನಿಸಿಕೊಂಡು ಫೋನ್ ಸ್ವಿಚ್‍ಆಫ಼್ ಮಾಡಿದ್ದಾಳೆ ಕಣೋ" ಅಂದ

"ಹೂಂ. ಸರಿ ಒಂದು ಕೆಲಸ ಮಾಡು ನಿನಗೆ ನಿನ್ನವಳ ಗೆಳತಿಯರು ಪರಿಚಯವಿರಬೇಕಲ್ಲವೆ? ಅವರಿಗೆ ಕರೆ ಮಾಡಿ ಅವಳ ಮನಸ್ಸನ್ನು reboot ಮಾಡೋಕೆ ಹೇಳು. ಎಲ್ಲಾ ಸರಿ ಹೋಗುತ್ತೆ" ಎಂದೆ.

ಆತ ಸ್ವಲ್ಪ ಸಿಟ್ಟಿನಲ್ಲೇ "ಆಯ್ತಪ್ಪ ಪುಣ್ಯಾತ್ಮ ಲವ್ ಟೆಕ್ನಿಶಿಯನ್ ನೀನು... ಸರ್ವರ್ ರಿಪೇರಿ ಮಾಡು ಅಂದ್ರೆ ಲವರ್‌ನೇ ರಿಪೇರಿ ಮಾಡಿಸೋ ಸಲಹೆ ಕೊಡ್ತೀಯ!" ಎಂದ

ನಾನು ಉತ್ತರಿಸಿದೆ "ಏನು ಮಾಡೋದು ಸ್ವಾಮಿ ಜನ ಯಾವುದೇ ತೊಂದರೆ ಬಗ್ಗೆ ಮೇಲ್ ಬರೆದರೂ ಉತ್ತರ ನೀಡಬೇಕದದ್ದು ನಮ್ಮ ಕರ್ತವ್ಯ. ನಿಮ್ಮಂಥ ಪ್ರೇಮಾಂಧರಿಗೆ ಸರ್ವರ್‌ಗೂ ಲವರ್‌ಗೂ ವ್ಯತ್ಯಾಸನೇ ಗೊತ್ತಾಗಲ್ಲ ಅನ್ಸುತ್ತೆ ಈ ನಡುವೆ" ಎಂದೆ.

ಅವನು ತಬ್ಬಿಬ್ಬಾಗಿ ತನ್ನ  Sent items ಚೆಕ್ ಮಾಡಿದ. ಆಗಲೇ ಎಲ್ಲಿ ತಪ್ಪಗಿದೆ ಎಂದು ಅವನಿಗೆ ತಿಳಿದದ್ದು. ವಿಷಯ ತಿಳಿದು ಇಬ್ಬರೂ ಬಿದ್ದು ಬಿದ್ದು ನಕ್ಕೆವು.

ನಮ್ಮ ಕಂಪನಿಯಲ್ಲಿ ಸರ್ವರ್‌ಗಳಿಗೆ ಹೀಗೆ ಹೆಸರಿಡುವ ಪದ್ಧತಿ ಇದೆ.. ಬೆಂಗಳೂರಿನಲ್ಲಿರುವ ಸರ್ವರ್‌ಗೆ  BGSERVER  ನ್ಯೂಯಾರ್ಕ್‍ನಲ್ಲಿರುವ ಸರ್ವರ್‌ಗೆ  NYSERVER  ಹಾಗೆ ಲಂಡನ್‍ನಲ್ಲಿರುವ ಸರ್ವರ್‌ಗೆ  LOSERVER  ಎಂದು ಹೆಸರು!  "LOSERVER NOT RESPONDING. PLEASE HELP"  ಎಂದು ಟೈಪ್ ಮಾಡಬೇಕಿದ್ದ ಕಡೆ ಕೆಲವು ಅಕ್ಷರಗಳು ಮಾಯವಾಗಿ ಅದು  "LOVER NOT RESPONDING"  ಆಗಿತ್ತು.

"ಸರಿ ಮಾರಾಯ ಈಗ ಸರ್ವರ್ ಪ್ರಬ್ಲಮ್ ಗೆ ಏನು ಮಾಡೋದು ಹೇಳು" ಅಂದ.

"ನೋಡು ಗೆಳೆಯ ಈ ಸರ್ವರ್ ಕೂಡ ಒಂಥರಾ ನಿನ್ ಲವರ್ ಇದ್ದಂಗೆ. ನಾನು ಹೇಳಿದ Logic ಅನ್ನೇ ಅಲ್ಲೂ ಬಳಸು ಸರಿ ಹೋಗುತ್ತೆ" ಎಂದೆ

"ಹೀಗೆ ಒಗಟೊಗಟಾಗಿ ಮಾತಾಡಬೇಡ್ವೋ.. ನೆನ್ನೆ ಇಂದ ಕೆಲಸಗಳಾಗಿಲ್ಲ..." ಅವ ಗೋಗರೆದ.

"ನೋಡೋ ಈ ಸರ್ವರ್ ಕೂಡ ಒಂಥರಾ ನಿನ್ ಲವರ್ ಇದ್ದಂಗೆ. ಅವಳು ನೆನ್ನೆ ನೀನಾಡಿದ್ದ ಮಾತನ್ನು ತಪ್ಪಾಗಿ ಗ್ರಹಿಸಿ ಮುನಿದು ಫೋನ್ ಸ್ವಿಚಾಫ್ ಮಾಡಿದ್ದಾಳೆ. ಸರ್ವರ್ ಕೂಡ ನೆನ್ನೆ ನೀನು ಹೊಡೆದ  password  ತಪ್ಪಾಗಿದ್ದಿದ್ದರಿಂದ ಮುನಿದು ನಿನ್ನ  account deactivate ಮಾಡಿದೆ. ನಾನಂದೆ ನೀನು ಅವಳ ಗೆಳೆತಿಯರ ಕೈಲಿ ಅವಳ ಮನ ಓಲೈಸು. ಇಲ್ಲೂ ಅಷ್ಟೆ ಸರ್ವರ್ ಸ್ನೇಹಿತರು ಅಂದರೆ ಸರ್ವರ್ ಅಡ್ಮಿನ್‍ಗಳಿಗೆ ಕರೆ ಮಾಡಿ ನಿನ್ನ  Account reactivate ಮಾಡಿಸು. ಆಗ ನಿನ್ನ ಎರಡೂ ತೊಂದರೆಗಳೂ ನಿವಾರಣೆಯಾಗುತ್ತವೆ" ಎಂದೆ. ಆತ ಸಂತೃಪ್ತನಾಗಿ ಧನ್ಯವಾದ ಹೇಳಿ ಫೋನಿಟ್ಟ.

ತಂತ್ರಙ್ಞಾನದ ಹಲವು ವಿಷಯಗಳನ್ನು ಜೀವನದ ಕೆಲವು ಅಂಶಗಳಿಗೆ ತರ್ಜುಮೆ ಮಾಡಿ ಹೇಳುವುದು ನನಗೆ ಬಹಳ ಹಿಂದಿನಿಂದ ಬಂದ ಅಭ್ಯಾಸ. ಅಲ್ಲಿನ ಸಿದ್ಧಾಂತಗಳಿಗೂ ಇಲ್ಲಿನ ಸಂದರ್ಭಗಳಿಗೂ ಬಹಳಷ್ಟು ಸಾಮ್ಯತೆ ಇದೆ. ಈಗ ನೋಡಿ ಈ desktop computer ಎಂಬುದಿದೆಯಲ್ಲ ಅದೊಂಥರ ಹಿಂದಿನ ಕಾಲದ ಮಧ್ಯಮವರ್ಗದ ಗೃಹಿಣಿ ಇದ್ದ ಹಾಗೆ. ಅದೆಷ್ಟೇ ಸಮರ್ಥವಾಗಿ ಕೆಲಸ ಮಾಡಿದರೂ ಯಜಮಾನನಿಗೆ ಅದರ ಹೆಸರೆತ್ತಿದ ಕೂಡಲೇ ಅದರ ಗಜಗಾತ್ರದ,  glamourless looks ಕಣ್ಣಿಗೆ ಕುಕ್ಕುತ್ತದೆ. ಮನೆ ಹೆಂಗಸರಿಗಿರುವಂತೆ desktopಗೆ mouse, keyboard, modemಗಳ ಪಾರಂಪರಿಕ ಬಂಧನ, ಕಟ್ಟುಪಾಡುಗಳು. ಅವಳನ್ನು ಹೊರಗೊಯ್ಯಲು ಯಜಮಾನ ಯೋಚಿಸುತ್ತಾನೆ ಖರ್ಚಾಗುತ್ತದೆಂದು. ಆದರೆ ಈ ಮೊಬೈಲ್ ಇದೆಯಲ್ಲ ಅದು ಒಂಥರಾ glamorous girlfriend ಇದ್ದ ಹಾಗೆ. ಹೊರ ಹೋದಾಗಲೆಲ್ಲಾ ಅದರೊಡೆಯ ಜಾಲಿಯಾಗಿ ಕೈ ಹಿಡಿದು ಕರೆದುಕೊಂಡು ಹೋಗುತ್ತಾನೆ. ಅವಳೊಂದು ಚೂರು ಗೋಳಾಡಿದರೂ ತಕ್ಷಣ chargingಗೆ ಹಾಕಿ ಆರೈಕೆ ಮಾಡುತ್ತಾನೆ. ಅವಳು ಕೇಳದಿದ್ದರೂ "ಖರ್ಚಿಗೆ ಬೇಕಾಗುತ್ತೆ ಇಟ್ಕೋ ಚಿನ್ನ" ಎಂದು ಕರೆನ್ಸಿ ಹಾಕಿಸುತ್ತಾನೆ. ಕವರ್ ಹೊದ್ದಿಸಿ ಬೆಚ್ಚಗೆ ಜೋಪಾನ ಮಾಡುತ್ತಾನೆ ಆದರೆ ಪಾಪ desktopಗೆ ಮಾತ್ರ ಕೆಲಸವಿದ್ದಾಗಷ್ಟೆ ಕರೆಂಟು ಕೊಡುವುದು!

ಮೊಬೈಲ್ latest ಆಗಿದ್ದಷ್ಟು, stylish ಆಗಿದ್ದಷ್ಟು ಕೈ ಹಿಡಿದವ enjoy ಮಾಡುತ್ತಾನೆ. ಅಕ್ಕಪಕ್ಕದವರು ಇಂಥ ಮಾಡೆಲ್ ತಮಗೆ ಸಿಗಲಿಲ್ಲವಲ್ಲ ಎಂದು ಕೈ ಹಿಸುಕಿಕೊಳ್ಳುತ್ತಾರೆ. ದೊಡ್ಡ ಜೇಬಿರುವವರು ದೊಡ್ಡ ದೊಡ್ಡ "Touching" ಸೌಲಭ್ಯವಿರುವ "ಮಾಡೆಲ್"‍ಗಳನ್ನು ತಮ್ಮದಾಗಿಕೊಳ್ಳುತ್ತಾರೆ. ಅಂಥ ಅದೃಷ್ಟವಂತರು ಒಮ್ಮೆ ಸವರಿದರೆ ಸಾಕು ಅವಳ ಮನಸ್ಸು ಮೊಬೈಲ್ ಸ್ಕ್ರೀನ್‍ನಂತೆ unlock ಆಗಿಬಿಡುತ್ತೆ. ಹೊಸತರಲ್ಲಂತೂ ಅವಳ ಪ್ರತಿಯೊಂದು ಭಾವವೂ ಹೊಸದಾಗಿ ಡೌನ್‍ಲೋಡ್ ಮಾಡಿದ Free appನಂತೆ ಮುದ ನೀಡುತ್ತವೆ.

ಇನ್ನು ಈ ಸಿ.ಡಿ.ಗಳಿವೆಯಲ್ಲ ಅದಂತೂ desktopಗೆ ಹೆರಿಗೆಯಾದಂತೆ! ಮನೆ ಮಡದಿಯು ತುಂಬು ಗರ್ಭಿಣಿಯಾದಾಗ ಹುಟ್ಟುವ ಮಕ್ಕಳಂತೆ ಇವು desktopನ harddisk ತುಂಬಿದಾಗ CD drive ಗರ್ಭದಿಂದ ಅಚ್ಚಾಗಿ ಮಕ್ಕಳಂತೆ ಹೊರಬರುತ್ತವೆ. ಮುಂಚೆಯೆಲ್ಲಾ ಮನೆ ತುಂಬುವಷ್ಟು ಮಾಡಿಕೊಳ್ಳುತ್ತಿದ್ದರು. ಈಗ ಒಂದೇ ಸಾಕು ಎನ್ನುತ್ತಾರೆ (USB!!) ಅವೂ ಹೆಚ್ಚಾದಷ್ಟು ಖರ್ಚು ನಿರ್ವಹಣೆಯ ಹೊರೆ ಜಾಸ್ತಿ. ಆದ್ದರಿಂದಲೇ ಅಚಾತರ್ಯದಿಂದ ಮಕ್ಕಳಾಗುವುದನ್ನು (ಸಿ.ಡಿ.) ತಪ್ಪಿಸಲು ಈ ಗುಳಿಗೆ ಎಲ್ಲಿಗೆ ಹೋದರೂ ಜೊತೆಯಲ್ಲೇ ಇರಲಿ..  Pendrive  ಮಾರಾಯ್ರೇ ನೀವೇನಂದುಕೊಂಡ್ರಿ??




Tuesday, May 20, 2014

MH-370



ನಿಲ್ಲು ನಿಲ್ಲು ನಿಲ್ಲೇ ಓ ಪತಂಗ
ಹೊತ್ತೊಯ್ದೆ ಜೀವಗಳ ಅದೆಲ್ಲಿಗೆ ಸಂಗ?

ಪೂರ್ವ ನಿಶ್ಚಿತ ಪಥದಿಂದ ಏಕೀ ನಿಗೂಢ ಪಲ್ಲಟ?
ಆಜನ್ಮ ರ‍್ಯಾಡಾರು ಬಂಧನದಿಂದ ಮುಕ್ತವಾಗುವ ಹಠ
ಸಾರಥಿಯೇ ಸಾವ ಬಯಸಿ ಸಂಪರ್ಕ ಕಡಿದನೇ ದಿಟ?
ಹಿಂದೂ ಮಹಾಸಾಗರ ಸೇರಿತೇ ಸೂತ್ರ ಹರಿದ ಪಟ?

ಅಂತ್ಯ ಹಾಡಿದ ಪೈಲಟು ಹಾರೈಸಿ ಅಂತಿಮ ಶುಭರಾತ್ರಿ
ಹಗಲ ಮತ್ತೆ ಕಾಣೆವೆಂದು ಮೊದಲೇ ಇತ್ತೇ ಖಾತರಿ?
ಎಲ್ಲೆಲ್ಲೂ ಅಚ್ಚರಿ! ಅಲಭ್ಯ ಗುಪ್ತಯಾನದ ಮಾಹಿತಿ,
ಮತ್ತೆ ಹುಟ್ಟಿ ಬಂದನೇ ಒಸಾಮ ಕೆಡವಲು ನಿನ್ನಾಹುತಿ?

ಭೂಗೋಳವ ಜಾಲಾಡಿ ಸೋತರು ಅಂತರಾಷ್ಟ್ರೀಯ ಪಡೆ
ವಿಫಲವಾಯಿತು ಅಪೂರ್ವ ಶೋಧ ಹುಡುಕಿ ಎಲ್ಲ ಕಡೆ
ನಕ್ಕರು ಮಂಗಳಗ್ರಹ ಜೀವಿಗಳು ನೋಡಿ ನಮ್ಮೆಡೆ
ಸ್ವಗ್ರಹದಿ ವಿಮಾನದ ಸುಳಿವಿಲ್ಲ, ನಮ್ಮ ಹಿಡಿದಾರೆ? ಬಿಡೆ.

ವಾಯುವಿಹಾರದಿ ಸದ್ದಿಲ್ಲದೆ ಸುಖನಿದ್ರೆಯಾಯಿತು ಚಿರನಿದ್ರೆ
ತಲುಪಿದೆ ಆಗಸದಾಚೆಯ ಅಙ್ಞಾತ ದೇಶ, ಅನಂತ ಎತ್ತರ,
ಮತ್ತೆ ಮತ್ತೆ ಒಡಲ ಜೀವಗಳ ಎತ್ತೆತ್ತಿ ನೀರಿಗೆಸೆದು ಬಂದರೂ
ನೀನಂತೂ ಗಂಗೆಯಂತೆಯೇ ಪ್ರಶ್ನಾತೀತ, ನಿರ್ದಯಿ, ನಿರುತ್ತರ!

ನಿಲ್ಲು ನಿಲ್ಲು ನಿಲ್ಲೇ ಓ ಪತಂಗ
ಹೊತ್ತೊಯ್ದೆ ಜೀವಗಳ ಅದೆಲ್ಲಿಗೆ ಸಂಗ?




Thursday, May 1, 2014

Mr. Fate's Poem

Mr. Fate's Poem

 Here I go back and hide again,
Happy I took you for a ride again,
Years have passed but, I didn’t change;
All you lost was the wrath of my revenge!

I felt great mixing up the things,
I felt great messing up the things,
I always destroy what you are happy with,
When even to think you have no bandwidth!

Of course, this time I felt bored,
Since you suffered less and smiled more,
Enmity apart, I admit you are great;
But I conquer all, I am Mr. Fate!

I troubled you when you were young
I troubled you when you were a kid
I am bound to continue, until you bid
…. An adieu to life!

Yours sinisterly
 
Mr. Fate

Monday, March 31, 2014

ಎಲೆ ನೆನಪೇ...

ಎಲೆ ನೆನಪೇ...



    "ಬೆಳಿಗ್ ಬೆಳಿಗ್ಗೆ ನಮ್ಮನೆ ಮುಂದೆ ಹೊಗೆ ಹಾಕ್ತಿದ್ದೀಯ? ತಗೊಂಡ್ ಹೋಗ್ ಆ ಕಡೆಗೆ..."
    ಆ ಖಾಲಿ ಸೈಟಿನ ಎದುರು ಮನೆಯವ ರಸ್ತೆ ಗುಡಿಸುವವಳ ಮೇಲೆ ಚೀರಿದ್ದು ನಿಶ್ಯಬ್ಧ ರಸ್ತೆಯ ಇಕ್ಕೆಲಗಳಲ್ಲಿ ಪ್ರತಿಧ್ವನಿಸಿದವು. ಕಸ ಗುಡಿಸುವ ಆ ಪಾಲಿಕೆ ಕೆಲಸದವಳು ಗೊಣಗಿಕೊಳ್ಳುತ್ತಾ ಏನು ಮಾಡುವುದೆಂದು ತೋಚದೆ ಅತ್ತಿತ್ತ ನೋಡುತ್ತಿದ್ದಳು. ಪಾಪ ಅವಳದೇನೂ ತಪ್ಪಿಲ್ಲ ಬಿಡಿ. ಬಹಳ ಪ್ರಶಾಂತವಾಗಿರುವ ನಮ್ಮ ಮನೆಯ ರಸ್ತೆಯ ಎರಡೂ ಬದಿಗಳಲ್ಲಿ ಸಾಲು ಸಾಲು ಮರಗಳು ಸಮೃದ್ಧವಾಗಿ ಬೆಳೆದುಕೊಂಡಿವೆ. ಅವುಗಳ ರೆಂಬೆ ಕೊಂಬೆಗಳು ಒಂದಕ್ಕೊಂದು ಒತ್ತೊತ್ತಾಗಿ ಸೇರಿಕೊಂಡು ಇಡೀ ರಸ್ತೆಗೆ ಒಂದು ನೈಸಗರ್ಿಕ ಚಪ್ಪರ ನಿಮರ್ಾಣವಾಗಿದೆ. ಸದಾ ನೆರಳು, ಬೇಸಿಗೆಯಲ್ಲೂ ನೇರ ಬಿಸಿಲು ಬೀಳುವುದು ಕಷ್ಟ. ಮಳೆಗಾಲ ಬಂದರಂತೂ ಎಲೆ ಕೊಂಬೆಗಳ ನಡುವೆ ಮಳೆನೀರಿನ ಹನಿಗಳು ಶೇಖರಣೆ ಆಗಿ ರಸ್ತೆಯಲ್ಲಿ ನಡೆದು ಹೋಗುವವರಿಗೆ ಎಸಿ ಅನುಭವ! ಉದ್ಯಾನವೊಂದಕ್ಕೆ ಹೊಂದುಕೊಂಡಿರುವ ವಾಹನ ಸಂಚಾರವಿಲ್ಲದ ಈ ಡೆಡ್ಎಂಡ್ ರಸ್ತೆ ನಿಜಕ್ಕೂ ಇಂದಿಗೂ ನಿವೃತ್ತರ ಸ್ವರ್ಗವೆನಿಸಿದ್ದ 80ರ ದಶಕದ ಬೆಂಗಳೂರನ್ನು ನೆನಪಿಸುತ್ತದೆ. ಆದರೆ ಪ್ರತಿ ವರ್ಷ ಚಳಿಗಾಲ ಮುಗಿಯುವ ಹೊತ್ತಿಗೆ ಇಲ್ಲೊಂದು ಸಮಸ್ಯೆ ಶುರುವಾಗುತ್ತದೆ. ಅದೇ ಈ ಮರಗಳಿಂದ ಉದುರುವ ಒಣಗಿದ ಎಲೆಗಳು! ಫೆಬ್ರವರಿ ಬಂತೆಂದರೆ ಈ ರಸ್ತೆ ತರಗೆಲೆ ಪಥವಾಗುತ್ತದೆ. ಎಲ್ಲೆಲ್ಲೂ ಎಲೆಗಳೇ. ದಿನಕ್ಕೆರಡು ಬಾರಿ ಕಸ ಗುಡಿಸಿದರೂ ಮತ್ತೆ ಮತ್ತೆ ಎಲೆ ಉದುರಿಸಿ ಮರಗಳು ಕಸ ಗುಡಿಸುವವರ ಗೋಳು ಹೋಯ್ದುಕೊಳ್ಳುತ್ತದೆ. ಅವರೋ ಎಲ್ಲೆಂದರಲ್ಲಿ ಗುಡ್ಡೆ ಹಾಕಿ ಉರಿಯಿಟ್ಟು ಹೋಗಿಬಿಡುತ್ತಾರೆ. ಅದು ತಮ್ಮ ಮನೆಯ ಮುಂದೆಂದು ತಿಳಿದಾಗ ಮನೆಯವರಿಗೆ ಹೊಟ್ಟೆ ಉರಿಯುವುದು ಸಹಜ.
   
ಆದರೆ ನನಗೆ ಈ ಒಣಗಿ ಉದುರಿದ ಎಲೆಗಳನ್ನು ಕಂಡರೆ ಏನೋ ಒಂದು ರೀತಿಯ ಅಕ್ಕರೆ. ನನಗೂ ಅವುಗಳಿಗೂ ಏನೋ ಒಂದು ರೀತಿಯ ಅವಿನಾಭಾವ ಸಂಬಂಧ. ನನ್ನ ಛಾಯಾಗ್ರಹಣದ ಹವ್ಯಾಸಕ್ಕೆ ಅವು ಎಷ್ಟೋ ಬಾರಿ ಉತ್ತಮ ವಿಷಯವಾಗಿವೆ. ಬೋಳು ಮರದ ಟೊಂಗೆಗಳಲ್ಲಿ ಚಿತ್ರ ವಿಚಿತ್ರ ಆಕಾರಗಳು ಕಂಡರೆ ನನಗೆ ಸ್ಫೂತರ್ಿ ಸಿಕ್ಕಂತೆ. ಇನ್ನು ಕೆಲವೇ ದಿನ ಕಳೆದರೆ ಪ್ರಕೃತಿಯಲ್ಲಿ ವಸಂತದ ಸಂಭ್ರಮ ಶುರುವಾಗುತ್ತದೆ. ಅದರ ಸೊಬಗನ್ನು ಸಂಪೂರ್ಣ ವಣರ್ಿಸಲು ಹೋದರೆ ನಾನಂತೂ ಪದಗುಚ್ಛ ಸಾಲದೇ ಮೂಕನಾಗುತ್ತೇನೆ. ಪ್ರತಿ ವರ್ಷ ಈ ಸಮಯಕ್ಕೆ ನವವಧುವಿನಂತೆ ಸಜ್ಜಾಗುವ ಭೂತಾಯಿಯ ಸಂಭ್ರಮವ ಸೆರೆ ಹಿಡಿಯಲು ನನ್ನ  ಕ್ಯಾಮೆರಾ ಹಾತೊರೆದು ಕಾದಿರುತ್ತದೆ. ಎಳೆ ಚಿಗುರಿನ ಎಲೆಗಳ ಮೇಲೆ ಮುಂಜಾನೆಯ ಹಿತ ರಶ್ಮಿಕಿರಣಗಳು ನೃತ್ಯವಾಡುವ ದೃಶ್ಯ ಅನನ್ಯ! ಸೂಯರ್ೋದಯ ಸಮಯದಲ್ಲಂತೂ ಬಿಸಿಲುಕೋಲಿಗೂ ಕೊಂಬೆಗಳ ಮರೆಯ ಚಿಗುರೆಲೆಗಳಿಗೂ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿರುವಂತೆ ಅನುಭವವಾಗುತ್ತದೆ. ನಿಸರ್ಗದಲ್ಲಿನ ಈ ಸಲ್ಲಾಪ ಸೆರೆ ಹಿಡಿದು ನನ್ನ ಕ್ಯಾಮೆರವೂ ಧನ್ಯೋಸ್ಮಿ ಎಂದು ಪ್ರಕೃತಿ ಮಾತೆಗೆ ನಮಿಸುತ್ತದೆ!
    ಒಣಗಿ ಕೆಳಗುರುಳಿದ ಎಲೆಗಳು ಮನದ ಹಳೇ ನೆನಪುಗಳ ಸಂಕೇತವಾಗಿ ಅದೆಷ್ಟೋ ಮಹಾಸಾಹಿತಿಗಳ ಕಥೆ ಕವನಗಳಲ್ಲಿ ನೆಲೆ ಊರಿವೆ . ಹೇಳಿ ಕೇಳಿ ಮೊದಲೇ ನಾನೂ ಭಾವಜೀವಿ. ನನಗೂ ಇವು ಹಲವು ಸುಂದರ ಫ್ಲಾಶ್ಬ್ಯಾಕ್ ನೆನಪುಗಳನ್ನು ಕಟ್ಟಿಕೊಟ್ಟಿವೆ. ತಂಪಾದ ಗಾಳಿಯಲ್ಲಿ ಮೆಲ್ಲಗೆ ಚರಪರನೇ ಸದ್ದು ಮಾಡುತ್ತಾ ಹಾರಾಡುವ ಈ ಎಲೆಗಳು ನನ್ನನು ಜನಪ್ರಿಯ ಹಿಂದಿ ಚಿತ್ರ "ಮೊಹಬ್ಬತ್ತೆ" ರಿಲೀಸ್ ಆದ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ! ಆ ಚಿತ್ರದಲ್ಲಿ ಪ್ರತೀ ಬಾರಿ ದೃಶ್ಯ ಬದಲಾಗುವಾಗ ತೆರೆಯ ಮೇಲೆ ಹೊಂಬಣ್ಣದ ತರಗೆಲೆಗಳು ಹಾರಾಡಿ ಹೋಗುತ್ತದೆ. 
 ನಾನು ಆಗಷ್ಟೇ ಹೈ ಸ್ಕೂಲು ಸೇರಿದ್ದ ಕಾಲವದು. ಶಾರುಕ್ ಖಾನರ ದೊಡ್ಡ ಅಭಿಮಾನಿಯಾಗಿದ್ದ ನಾನು ಗೆಳೆಯರ ಜೊತೆ ಆ ಸಿನಿಮಾ ನೋಡಲು ಹೋಗಿದ್ದೆ. ಅಮಿತಾಬರ ಖಡಕ್ ಡೈಲಾಗ್ಗಳು, ಗಡಸು ಧ್ವನಿ, ಶಾರುಕ್ ಪಾತ್ರದ ಪ್ರೇಮಿಗಳ ಪರ ವಾದ, ಇನ್ನೂ ಮೂರು ಸುಂದರ ಹೊಸ ಜೋಡಿಗಳ ಪ್ರಣಯ, ಐಶ್ವರ್ಯ ರೈ ಮೋಡಿ, ಹಿನ್ನೆಲೆಯಲ್ಲಿ ಆಗಾಗ ಗುನುಗುನಿಸುತ್ತಿದ್ದ ಲತಾ ಮಂಗೇಶ್ಕರರ ಮಧುರ ಆಲಾಪ ಧ್ವನಿ. ಎಲ್ಲವೂ ಪ್ರೇಕ್ಷಕರ ಹೃದಯ ಗೆದ್ದಿತ್ತು. ಸಿನಿಮಾ ಮುಗಿದು ಹೊರ ಬರುವ ಹೊತ್ತಿಗೆ ಸ್ನೇಹಿತರೆಲ್ಲರೂ ಸೇರಿ ನನ್ನನು ದೊಡ್ಡ ಬಕರಾ ಮಾಡುವ ಹೊಂಚು ಹಾಕಿದ್ದರು! ಕನ್ನಡಕ ಧರಿಸಿದರೆ ಶಾರುಕ್ ಥೇಟ್ ನನ್ನಂತೆಯೇ ಕಾಣುತ್ತಾನೆಂದು ಎಲ್ಲರೂ ಹೇಳಲು ಶುರು ಮಾಡಿದರು! ತರಲೆಗಳಾ ಎಂದು ಬೈದು ನಾನು ಮನೆ ಕಡೆಗೆ ನಡೆದರೂ ಅವರ ಮಾತಿನಲ್ಲಿ ಸ್ವಲ್ಪವಾದರೂ ನಿಜವಿರಬಹುದೇ ಎಂಬ ಟೊಳ್ಳು ಜಂಭ ಒಳಗೊಳಗೇ ಚಿಗುರೊಡೆಯುತಿತ್ತು. ಮನದಲ್ಲೇ ಬೀಗುತ್ತಿದ್ದೆ! ಮನೆಗೆ ಹೋಗಿ ನಿಜವಾಗಿ ನನಗೂ ಶರುಕ್ ಖಾನಿಗೂ ಹೋಲಿಕೆ ಇರಬಹುದೇ ಎಂದು ಕನ್ನಡಿಯ ಮುಂದೆ ವಿಧ ವಿಧ ಕೋನಗಳಲ್ಲಿ ಮುಖ ಮಾಡಿ ನಿಂತು ನೋಡಿಕೊಂಡದ್ದು ಇಂದಿಗೂ ನೆನೆದಾಗಲೆಲ್ಲಾ ನಗು ತರಿಸುತ್ತದೆ. ಕನ್ನಡಿಗೂ ಬೆಳೆದು ನಿಂತ ಯೌವ್ವನಕ್ಕೆ ಸತ್ಯ ಹೇಳುವ ತಾಕತ್ತಿರಲಿಲ್ಲ! ಗೆಳೆಯರೂ

ಈ ಭ್ರಮೆಗೆ ಹಾಗೆ ದಿನವೂ ನೀರೆರೆಯುತ್ತಾ ಹೋದರು. ನನ್ನ ಶಾರುಕ್ ಹುಚ್ಚು ಹೆಮ್ಮರವಾಗಿ ಬೆಳೆಯುತ್ತಾ ಹೋಯಿತು. ಬಟ್ಟೆ, ನಡಿಗೆ, ಹೇರ್ ಸ್ಟೈಲ್ ಎಲ್ಲಾ ಅಂತೆಯೇ ಬದಲಾದವು. ಮುಂದೆಂದೋ ಒಂದಿನ ಗೆಳೆಯರ ಮಾತಿನಲ್ಲಿ ಎಳ್ಳಷ್ಟೂ ಸತ್ಯವಿಲ್ಲದಿರುವುದು ಅರಿವಾಗಿ ನನಗೆ ಙ್ಞನೋದಯವಾಯಿತು! ಆದರೂ ಅಂದಿನ ಹುಚ್ಚಾಟಗಳು, ಕಪಟ ಅರಿಯದೇ ಯಾರು ಏನೇ ಹೇಳಿದರೂ ನಂಬಿಬಿಡುವ ಮುಗ್ಧತೆ ಇಂದಿಗೂ ನೆನಪಾಗಿ ನಗಿಸುತ್ತದೆ. ಆ ಹುಚ್ಚಾಟಗಳ ನಿನಪಿಗೆಂದೇ ಕಾಲೇಜಿನ ದಿನಗಳ ಫೋಟೋಗಳಿಗೆ ಮೊಹಬ್ಬತ್ತೆಯ ಎಲೆಗಳಿರುವಂತಹ ಕಟ್ಟನ್ನು ಹಾಕಿಸಿಟ್ಟಿದೇನೆ.
    ಋತುಮಾನದ ವಸಂತದಂತೆ ಬಾಲ್ಯ, ಯೌವ್ವನ ಎಂಬುದು ನಮ್ಮ ಜೀವಮಾನದ ವಸಂತಗಳು. ಆ ವಸಂತಗಳ ನೆನಪುಗಳು ಎಳೆ ಚಿಗುರಿನಂತೆ ಎಂದೆಂದಿಗೂ ಹಚ್ಚ ಹಸುರು. ಅದ್ದರಿಂದಲೇ ಮಾನವ ತನ್ನ ವಯಸ್ಸನ್ನು ವಸಂತದೊಂದಿಗೆ ಗುರುತಿಸಿಕೊಂಡು ಇಷ್ಟು ವಸಂತಗಳನ್ನು ಕಂಡೆ ಎನ್ನುವುದು. ಋತುಮಾನ ಚಕ್ರದಲ್ಲೇನೋ ಪ್ರತೀ ಸರದಿಯಲ್ಲೂ ವಸಂತ ಬರಲೇಬೇಕು ಆದರೆ ಜೀವನದ ಚಕ್ರದಲ್ಲಿ ಅಂತಹ ನಿಯಮ ಅನ್ವಯವಾಗುವುದಿಲ್ಲ. ಎಲ್ಲಾ ಅವರವರು ಪಡೆದುಕೊಂಡು ಬಂದಂತೆ. ಇಡೀ ಜೀವಮಾನವೆಲ್ಲಾ ಒಂದೂ ವಸಂತ ಕಾಣದೇ ಬರದಲ್ಲಿಯೇ, ಬಡತನದಲ್ಲಿಯೇ, ಕಷ್ಟ ಕೋಟಲೆಗಳಲಿಯೇ ನರಳಿದ ಜೀವಗಳೆಷ್ಟೋ? ಆದರೂ ಜೀವನದ ವಸಂತಗಳು ತಮ್ಮ ತೊರೆಯದಿರಲಿ ಎಂದು ಹಾತೊರೆಯುವವರಲ್ಲಿ ನಾನೂ ಒಬ್ಬ. ಇಂದಿಗೂ ನಮ್ಮ ಬಾಲ್ಯ ಹಾಗೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಅಮ್ಮ ಇಂದಿಗೂ ಬಿಸಿ ಬಿಸಿ ರೊಟ್ಟಿಯ ಮಾಡಿ ಡಬ್ಬಿಗೆ ಹಾಕಿ "ದಾರಿಯಲ್ಲಿ ಹುಷಾರು ಮಗಾ" ಎನ್ನುತ್ತಾ ಶಾಲೆಗೆ ಕಳಿಸುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಸಂಜೆಯಾಗುತ್ತಲೇ ಬ್ಯಾಟು ಬಾಲು ಹಿಡಿದು ಪಕ್ಕದ ಮನೆಯವ ಬಂದು ಕಿಟಕಿಯಲ್ಲಿ ಸನ್ನೆ ಮಾಡಲು ಅಣ್ಣನ ಕಣ್ಣು ತಪ್ಪಿಸಿ ಕಾಂಪೌಂಡು ಹಾರಿ ಹೋಗುವಂತಿದ್ದರೆ, ಹಿತ್ತಲು ಮನೆಯವರ ತೋಟದಲ್ಲಿ ನಾವು ಇಂದಿಗೂ ಮಾವಿನಕಾಯಿ ಕದ್ದು ತಿನ್ನುವಂತಿದ್ದರೆ, ಮೂಲೆಯಲ್ಲಿ ಕುಟಾಣಿ ಕುಟ್ಟುತ್ತಾ ಕುಳಿತಿರುತ್ತಿದ್ದ ಅಜ್ಜಿ ಇಂದಿಗೂ ನಮ್ಮನ್ನು ಕರೆದು ಕಥೆ ಹೇಳುತ್ತಾ ತಟ್ಟಿ ಮಲಗಿಸುವಂತಿದ್ದರೆ, ಅಪ್ಪ ಇಂದಿಗೂ "ಚೆಲುವೆಯ ನೋಟ ಚೆನ್ನ..." ಎಂದು ಹಾಡುತ್ತಾ ಕಣ್ಣಲ್ಲೇ ಅಮ್ಮನನ್ನು ಛೇಡಿಸುವಂತಿದ್ದರೆ... ಉಫ್... ಹೇಳುತ್ತಾ ಹೋದರೆ ಒಂದೇ ಎರಡೇ? ವಸಂತದ ನೆನಪುಗಳು ಅತಿ ಮಧುರ, ಅನಂತ. ನೆನಪುಗಳ ಮೆರವಣಿಗೆಯಲ್ಲಿ ನನ್ನ ಮೈಮರೆಸಿದ ಈ ವಸಂತಕ್ಕೂ, ಒಣ ಎಲೆಗಳಿಗೂ ಮನಸ್ಸೂ ಧನ್ಯತಾಭಾವದಿಂದ ನಮಿಸುತ್ತದೆ. 

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಪ್ರಕೃತಿಯಂತೆಯೇ ಈ ಯುಗಾದಿಯು ನಿಮ್ಮೆಲ್ಲರ ಜೀವನದಲ್ಲಿ ನವವಸಂತ ತರಲಿ. ಮನದ ಮರದಲ್ಲಿ ಮಧುರ ನೆನಪುಗಳ ಎಲೆಗಳು ಚಿಗುರಲಿ....

Monday, March 10, 2014

ಹೂವೇ... ನಾ ಬರುವೆ..


ಹೂವೆ,

ರವಿ ಬಂದನೆಂದು
ಮುಖವರಳಿಸಿ ನಿಂತು
ಹಗಲುಗನಸಲಿ ತೇಲದಿರು
ನಿನ್ನ ಆವರಿಸಲು ನಿಶೆಯಾಗಿ ನಾ ಬರುವೆ

ಕತ್ತಲೆ ಕವಿದಿರಲು
ನಿನ್ನೊಲವಿನಾಗಸಕೆ
ಬೇರೆ ತಾರೆಯ ಹುಡುಕದಿರು
ನಿನ್ನ ಅರಳಿಸಲು ಉಷೆಯಾಗಿ ನಾ ಬರುವೆ

ಸೌಂದರ್ಯ ಚಿಲುಮೆಯೆ
ಅವರಿವರ ರಸಿಕತೆಯ
ತಂಗಾಳಿಗೆ ತೇಲಿ ಆವಿಯಾಗದಿರು
ನಿನ್ನ ಆಲಿಂಗಿಸಲು ಆಕಾಶವಾಗಿ ನಾ ನಿಲ್ಲುವೆ

ಈ ದುಂಬಿಗೇ ಮೀಸಲಿಡು
ನಿನ್ನ ಸುಗಂಧ ಸರ್ವಸ್ವವ
ಮಧುಬಟ್ಟಲಿನಮೃತವ ನನಗಾಗಿ ಕಾದಿರಿಸು
ನಿನ್ನಲ್ಲಿ ಆಸೆಗಳ ಹೂ ಪಕಳೆಯಂತೆ ಅರಳಿಸುವೆ


ಹಾರಿ ಹೋಯಿತು ದುಂಬಿ
ಮಧು ಮೋಜುಗಳಲ್ಲಿ ಎದೆತುಂಬಿ
ಬಂದಿಳಿದರು ಇವಳಂಗಳಕೆ ಹೊಸ ಅತಿಥಿ
ಇವಳು ಒಲ್ಲೆ ಎಂದು ಬಾಡುವ ಹಾಗಿಲ್ಲ
ಉಂಡು ಕೊಂಡು ಹೋದವ ತಿರುಗಿ ನೋಡುವುದಿಲ್ಲ
ಛೇ ಇಲ್ಲಿ ಪ್ರೇಮವಿಲ್ಲ, ಬರೀ ಪುರುಷ ಪ್ರಾಧಾನ್ಯವೇ!

Monday, January 27, 2014

ಓಂ ನಿಯಮಾಯ ನಮಃ !!

"ಓಂಸ್ ಲಾ" ಕೊನೆಯ ಬೆಂಚಿನಲ್ಲಿ ಮಲಗಿರುವವರೆಲ್ಲಾ ಬೆಚ್ಚಿಬಿದ್ದು ಏಳುವಷ್ಟು ಜೋರು ದನಿಯಲ್ಲಿ ಪ್ರೊಫ಼ೆಸ್ಸರ್ರು ಅರಚಿದರು. ವರ್ಷಾನುವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಪಾಠಗಳು ಶುರುವಾಗುವುದೇ ಈ ನಿಯಮದೊಂದಿಗಾದರೂ ಅದು ಈಗಷ್ಟೇ ತಾವೇ ಆವಿಷ್ಕಾರಿಸಿದ ಹೊಸ ವಿಷಯವೇನೋ ಎಂಬಂತೆ ವಿವರಿಸಿವುದು ನಮ್ಮ ಪ್ರೊಫ಼ೆಸ್ಸರ್ರಿನ ಅಭ್ಯಾಸ.



 "The amount of current flowing through a conductor is directly proportional to strength of the voltage applied across it"  ಕಪ್ಪು ಬೋರ್ಡಿನ ಮೇಲೆ ಜೇಡರ ಬಲೆಯಂತೆ ಕಾಣುವ ಒಂದು ಸರ್ಕಿಟ್ ಚಿತ್ರ ಬಿಡಿಸಿ ಗೆದ್ದ ಹುಮ್ಮಸ್ಸಿನಲ್ಲಿ ಪ್ರೊಫ಼ೆಸ್ಸರ್ರು ನಮ್ಮೆಡೆಗೆ ತಿರುಗುವ ಮುಂಚೆ, ನಾನಿನ್ನು ನಿಮ್ಮ ಶೋಷಣೆ ತಾಳಲಾರೆ ಎಂದು ಅರಚಿ ಹೇಳುತ್ತಾ ಪ್ರಾಣ ಬಿಡುವಂತೆ, ಅವರ ಕೈಯ್ಯಲ್ಲಿದ್ದ ಬಳಪದ ಕೋಲು ಪಟಕ್ಕನೇ ಮುರಿದು ಕೆಳಗುರುಳಿ ಆತ್ಮಹತ್ಯೆ ಮಾಡಿಕೊಂಡಿತು! ತೂಕಡಿಸುವ ಹುಡುಗರತ್ತ ಗುರಿ ಮಾಡಿ ಎಸೆಯಲು ನಮ್ಮ ಪ್ರೊಫ಼ೆಸ್ಸರ್ರು ಸದಾ ಬಳಿ ಇಟ್ಟುಕೊಳ್ಳುವ ತಮ್ಮ ತುಂಡು ಬಳಪಗಳ ಬತ್ತಳಿಕೆಗೆ ಮತ್ತೊಂದು ಕ್ಷಿಪಣಿ ಸೇರಿತು!

ನಾನು ಮೊದಲಿನಿಂದಲೂ ಇತರರಿಗಿಂತ ಭಿನ್ನ... ತೂಕಡಿಸುವ ಬದಲು ಯಾವುದೋ ಕತೆ ಕವನಗಳ ಗುಂಗಿನಲ್ಲಿ ತರಗತಿಯಲ್ಲಿ ಅನಿವಾರ್ಯವಾಗಿ ಕಳೆಯಲೇಬೇಕಾದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೆ...  C-Progams  ಬರೆದುಕೊಂದು ಹೋಗಬೇಕಿದ್ದ  Lab Record book ನಲ್ಲಿ ಧೈರ್ಯವಾಗಿ ಒಂದು ರೇಖಾ ಚಿತ್ರದ ಜೊತೆಗೆ ವಿರಹಗೀತೆ ಬರೆದು ಉಪನ್ಯಾಸಕಿಗೆ ಕೊಟ್ಟ ಖ್ಯಾತಿಗೆ ಪಾತ್ರನಾಗಿದ್ದೆ!

ಅಂದು ಮೇಷ್ಟ್ರು ಹೇಳುತ್ತಿದ್ದ ಓಂಸ್ ಲಾ ವಿಷಯಗಳು ಮತ್ತು ನನ್ನ ತಲೆಯಲ್ಲಿದ್ದ ಪ್ರೀತಿ ಪ್ರೇಮದ ವಿಷಯಗಳು ಬೆರಕೆಯಾಗಿ ಹೊಸದ್ಯಾವುದೋ ಲಾ ಆವಿಷ್ಕಾರಗೊಳ್ಳುವಂತೆ ಕಾಣುತಿತ್ತು. ಪಾಪ ಅವನ್ಯಾರೋ ಓಂ ಅನ್ನುವವನು ಹೇಳಿರೋ ಮಾತು ಶತ ಪ್ರತಿಶತ ಸತ್ಯ ಕಣ್ರೀ! ಜೀವನದಲ್ಲಿ ನಾವು ಏನೇ ಕೆಲಸಗಳನ್ನು ಮಾಡಲು ಹೋದರು ಒಂದಲ್ಲ ಒಂದು ರೀತಿಯ ಅಡ್ಡಿ ತಡೆಗಳು ಉಂಟಾಗುತ್ತವೆ. ಯಾಕೆ ಎಂದು ಕೇಳಿದರೆ ಪಾಪ-ಪುಣ್ಯ, ಅದೃಷ್ಟ, ಗ್ರಹಗತಿ, ಹಣೆಬರಹ, ಪಡ್ಕೊಂಡು ಬಂದಿದ್ದು, ಕೇಳ್ಕೊಂಡು ಬಂದಿದ್ದು ಅಂತ ನೂರಾರು ಕಾರಣಗಳನ್ನು ಕೊಡುತ್ತಾರೆ. ಅವನ್ನೆಲ್ಲಾ ಸೇರಿಸಿ ಓಂ ಒಂದೇ ಒಂದು ಪದದಲ್ಲಿ ವಿವರಣೆ ನೀಡಿದ್ದಾನೆ... ಅದೇ "Resistance" ಪಾಪಿಗಳಿಗೆ ಅದು ಹೆಚ್ಚಿರುತ್ತೆ ಅದಕ್ಕೆ ಅವರ ಕೆಲಸ ಕಾರ್ಯಗಳಲ್ಲಿ ಹೆಚ್ಚು ಅಡೆ ತಡೆ ಎದುರಾಗುತ್ತೆ. ಈ ಪುಣ್ಯ ಮಾಡಿದವರು, ಅದೃಷ್ಟವಂತರು, ಕೇಳ್ಕೊಂಡು ಬಂದಿರುವವರು ಎನ್ನುತ್ತಾರಲ್ಲ ಅವರಿಗೆ ಭಗವಂತ ಕಮ್ಮಿ Resistance ಹಾಕಿ ಕಳುಹಿಸಿರುತ್ತಾನೆ ಕಣ್ರೀ, ಅದಕ್ಕೆ ಅವರ ಸರ್ಕಿಟ್ ಅಂದರೆ ಜೀವನದಲ್ಲಿ ಬೇಕಾದಷ್ಟು ಕರೆಂಟ್ ಅಂದರೆ ಕಾರ್ಯಗಳು ಸರಾಗವಾಗಿ ಹರಿದುಹೋಗುತ್ತದೆ! ಓಂ ಹೇಳಿರುವಂತೆ ಅಂಥವರು ತಮ್ಮ ಜೀವನದ ಸರ್ಕೀಟ್‍ನಲ್ಲಿ ಹೆಚ್ಚಿಗೆ ಕರೆಂಟ್ ಹರಿಸಲು ನತದೃಷ್ಟರಂತೆ ಆ ಕಡೆಯಿಂದಲೂ ಈ ಕಡೆಯಿಂದಲೂ ಭಾರಿ ಪ್ರಮಾಣದ Voltage ಹಾಕಬೇಕಿಲ್ಲ, ಹೆಚ್ಚು ಶ್ರಮ ಪಡಬೇಕಿಲ್ಲ, ನಸೀಬಿನ ಅವಾಹಕತ್ವದ ವಿರುದ್ಧ ಹೆಚ್ಚು ಹೋರಾಟ ನಡೆಸಬೇಕಿಲ್ಲ. ಆದರೆ ಪಾಪ ಈ ನತದೃಷ್ಟರ ಪಾಡು ಹಾಗಲ್ಲ... ಹೆಚ್ಚಿಗೆ ಹೇಳುವುದು ಯಾಕೆ? ಈ ಕೆಳಗಿನ ಚಿತ್ರ ನೋಡಿದರೆ ನಿಮಗೇ ಅರ್ಥವಾಗುತ್ತದೆ.


ಮನಸಲ್ಲಿ ಹೀಗೆಲ್ಲ ಹರಿದಾಡುತ್ತಿದ್ದ ವಿಚಾರಧಾರೆಗಳ ಮಧ್ಯೆ ತೇಲಾಡುತ್ತಿದ್ದ ನನ್ನ ಯಾವುದೋ ಕೈಬಳೆಗಳ ಝಲ್ ಝಲ್ ಸದ್ದು ಎಚ್ಚರಮಾಡಿ ಮತ್ತೆ ನನ್ನ ಕ್ಲಾಸಿಗೆ ಎಳೆದು ತಂದಿತು... ಪಕ್ಕದ ಸಾಲಿನಲ್ಲಿದ್ದ ನಳಿನಿ ಅಂದು ಕೈಗೆ ಒಂದು ಡಜ಼ನ್ ಹೊಸ ಬಳೆಗಳನ್ನು ಹಾಕಿಬಂದಂತಿತ್ತು... ಬಳೆಗಳ ಝಲ್ಲಿಗೆ ಸೋಲದ ರಸಿಕನುಂಟೆ? "ಹಸಿರು ಗಾಜಿನ ಬಳೆಗಳೇ..." ಹಾಡಿನ ಸುಧಾರಾಣಿಯಂತೆ ಕಾಣುತ್ತಿದ್ದ ಅವಳನ್ನೇ ಎರಡು ಸೆಕೆಂಡು ಅರಿವಿಲ್ಲದೆ ನೋಡಿದೆ.. ಅವಳು ಒಮ್ಮೆ ನನ್ನೆಡೆಗೆ ಕೆಂಗಣ್ಣು ಬೀರಿ ಸಿಟ್ಟಿನಿಂದ ಮುಖ ತಿರುಗಿಸಿಕೊಂಡಳು! ಮನೆಗಳಿಗೆ ಸೂರಿನ ಮೇಲೆ ಸಿಂಟೆಕ್ಸ್ ತೊಟ್ಟಿ ಇಟ್ಟಿರುವಂತೆ ಈ ಹುಡುಗಿಯರಿಗೆ ಮೂಗಿನ ಮೇಲೆ ಸಿಟ್ಟಿನ ಸಿಂಟೆಕ್ಸ್ ಟ್ಯಾಂಕ್ ಇರುತ್ತೆ ಕಣ್ರೀ... ನಮ್ಮಂತ ಬಡಪಾಯಿಗಳು ಒಮ್ಮೆ ತಿರುಗಿ ನೋಡಿದರೂ ಪುಸುಕ್ ಅಂತ ಹರಿದು ಬಂದು ಮುಖವೆಲ್ಲ ಕೆಂಪಾಗಿಸಿಬಿಡುತ್ತದೆ! ಅವಳು ಮುಖ ತಿರುವಿದಂತೆ ನಾನೂ ತಿರುವಿ ಬೋರ್ಡಿನೆಡೆಗೆ ನೋಡಿದೆ...

ಮೇಷ್ಟ್ರು ಅಲ್ಲಿ ಹಾಕಿದ್ದ ಆ ಸರ್ಕಿಟ್ ಚಿತ್ರ ಯಾಕೋ ನನ್ನ ಕಣ್ಣು ಸೆಳೆಯಿತು. ಎಷ್ಟು ಚೆನ್ನಾಗಿದೆ ಈ ಚಿತ್ರ. ಇದು ಬರಿ ಓಂನ ತತ್ವವಲ್ಲ ನಮ್ಮಂತಹ ಕಾಲೇಜು ಹುಡುಗರ ಜೀವನ ತತ್ವವನ್ನೂ ಸಾರುವಂತಿದೆಯಲ್ಲಾ ಎಂಬ ಯೋಚನೆ ತಲೆಯೊಳಗೆ ಹರಿಯುತ್ತಿರುವಂತೆ ಅವರು ಬರೆದ ಆ ಚಿತ್ರ ನನ್ನ ಕಣ್ಣುಗಳಲ್ಲಿ ಹಾಗೇ ಮಾರ್ಪಾಡಾದವು! ಆ ಚಿತ್ರದಲ್ಲಿ ಒಂದೆಡೆಗೆ + ಅಂದರೆ ಪಾಸಿಟಿವ್ ಶಕ್ತಿ ಇದೆ. ಇನ್ನೊಂದೆಡೆ - ಅಂದರೆ ನೆಗೆಟೀವ್ ಶಕ್ತಿ ಇದೆ. ನಮ್ಮ ಕಾಲೇಜಲ್ಲೂ ಹಾಗೆ... ಎಲ್ಲಾ ಕ್ಲಾಸಲ್ಲಿ ಕೂಡ ಹುಡುಗರೆಲ್ಲಾ ಒಂದು ಕಡೆ, ಹುಡುಗಿಯರೆಲ್ಲಾ ಒಂದು ಕಡೆ. ನಿಜ ಹೇಳಬೇಕಂದರೆ ಆ ಚಿತ್ರದಲ್ಲಿರೋ + ಹುಡುಗರಿಗೇ ಸಂಬಂಧಪಟಿದ್ದು. ಈ ಹುಡುಗರು ಯಾವಾಗ್ಲೂ  "additive in nature"  ಎಷ್ಟೇ ಜನ ಹುಡುಗಿಯರು ಬಂದರು ಅವರು ತಮ್ಮ  Crush list ನಲ್ಲೋ Friend list  ನಲ್ಲೋ  "add"  ಮಾಡ್ಕೋತಾನೆ ಹೋಗುತ್ತಾರೆ. ಈ ನಳಿನಿಯ ಹಾಗಂತೂ ಯಾವತ್ತೂ ಯಾರಿಗೂ ಮೂತಿ ತಿರುವೋದಿಲ್ಲ... ಕಾಲೇಜಿನಲ್ಲಿ ಯಾರೇ ಹೊಸ ಪರಿಚಯವಾದರೂ ತಕ್ಷಣ Facebookನಲ್ಲಿ  friend request ಕಳಿಸೋದು  Twitter  ನಲ್ಲಿ  Follow  ಮಾಡೋದು ಬಡಪಾಯಿ ಹುಡುಗರೇ ತಾನೆ. ಹಾಗಂತ ಕೀಳರಿಮೆ ಬೇಡ. "+" ಪಾಸಿಟಿವ್ ಅನ್ನಿಸ್ಕೊಳ್ಳೋಕೆ ಇನ್ನು ಒಂದು ಕಾರಣ ಇದೆ. ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಲ್ಲವನ್ನೂ ಪಾಸಿಟಿವ್ ಆಗಿ ತಗೊತಾರೆ. ಬೇಕಿದ್ರೆ ಹುಡುಗಿಯರೆದುರು ಸದಾ ಹಲ್ಲು ಕಿರಿಯೋ ಹುಡುಗರನ್ನ ನಿಮ್ಮ ಎಷ್ಟು  subjects  ಬಾಕಿ ಇದೆ ಎಂದು ಕೇಳಿ ನೋಡಿ ನೋಡೋಣ. ಎಷ್ಟೆಲ್ಲಾ ಬಾಕಿ ಇದ್ದರೂ ಅಷ್ಟು ಪಾಸಿಟಿವ್ ಆಗಿ ನಗುವ ಅಭ್ಯಾಸ ಹುಡುಗಿಯರಿಗೆಲ್ಲಿ ಬರಬೇಕು? ಹುಡುಗಿಯರು ಯಾವಾಗ್ಲೂ - ಅಂದರೆ ನೆಗೆಟೀವ್ ಸೈಡ್ ಕಣ್ರೀ... ತಾಜ್‍ಮಹಲ್ ತಂದುಕೊಡ್ತೀನಿ ಅಂದರು ಇಲ್ಲಿವರೆಗೆ ನನಗೆ ಎಲ್ಲರೂ "NO" ಅಂತಾನೆ ಹೇಳಿರೋದು! ಆದರೂ ನನ್ನ ಹೃದಯ ಮೃದು ಕಣ್ರೀ ಹುಡುಗಿಯರು ನೆಗೆಟೀವ್ ಅಂತ ಹೆಚ್ಚು ಒತ್ತಿ ಹೇಳಿದರೆ ಅವರು ನೊಂದ್ಕೋತಾರೆ ಪಾಪ! ಇನ್ನು ಪಾಸಿಟೀವ್ ನೆಗೆಟೀವ್‍ಗಳ ಮಧ್ಯೆ ಯಾವಾಗಲೂ ಕರೆಂಟ್ ಇದ್ದಿದ್ದೇ. ಯಾವ ಕರೆಂಟು ಅಂತೀರ? ಸುಂದರವಾದ ಹುಡುಗಿ ಸ್ಮೈಲ್ ಕೊಟ್ಟಾಗ ಮೈ ಜುಮ್ ಅನ್ನೋಲ್ವ? ಅದು ಈ ಕರೆಂಟಿಂದ ಕಣ್ರೀ... ಇನ್ನು ಈ ಕರೆಂಟಿಗೆ ಇದ್ದೆ ಇರಬೇಕಲ್ಲ Resistance...  ನಮ್ಮ ಪ್ರೊಫ಼ೆಸ್ಸರಂತೋರು, ಕ್ಯಾಂಪಸಲ್ಲಿ ಎಲ್ಲೆಂದರಲ್ಲಿ ಮಾತಾಡುತ್ತ ನಿಲ್ಲುವ ಹಾಗಿಲ್ಲ ಅನ್ನೋ ನಿಯಮಗಳು, ಲೈಬ್ರರಿನಲ್ಲಿ ಮುಖ ನೋಡಿದ್ರೆ ಕೆಂಗಣ್ಣು ಬೀರೋ ಲೈಬ್ರರಿಯನ್, ಅಸೈನ್ಮೆಂಟು, ಇಂಟರ್ನಲ್ಸು ಹಾಳು ಮೂಳು ಕೆಲವು ಸಲ ಸಹಪಾಠಿಗಳು ಕೂಡ Resistance  ಆಗಿಬಿಡ್ತಾರೆ ಕಣ್ರೀ... ಇದನೆಲ್ಲಾ ಮೀರಿ ಹುಡುಗ ಹುಡುಗಿಯರ ಮಧ್ಯೆ ಕರೆಂಟ್ ಹರಿಯಬೇಕಂದ್ರೆ ಅವರಿಗೆ ಮೀಟ್ರಿರಬೇಕು... ಕ್ಷಮಿಸಿ Voltage ಇರಬೇಕು ಕಣ್ರೀ!

ಮತ್ತೊಮ್ಮೆ ಎಚ್ಚರ ಆಯ್ತು! ತಲೆಯೆತ್ತಿ ಅಬ್ಬಬ್ಬಾ! ಕಪ್ಪುಬೋರ್ಡಿನ ತುಂಬಾ ಆಗಲೇ ಎಂದೂ ಕಂಡರಿಯದ ಭಾಷೆಯ ಫ಼ಾರ್ಮುಲಾಗಳನ್ನು ತುಂಬಿಸಿ, ಕೊನೆಯ ಸಾಲಿನ ಕೆಳಗೆ ಎರಡು ಗೆರೆ ಎಳೆಯುತ್ತಾ ಗೆಲುವಿನ ನಗೆ ಬೀರಿ "Hence the theorem is proved" ಎನ್ನುತ್ತಾ ನಮ್ಮೆಡೆಗೆ ತಿರುಗಿದ ಪ್ರೊಫ಼ೆಸ್ಸರ್ರು ನನಗೆ ಭೀಷ್ಮ ಪಿತಾಮಹಾರಂತೆ ಕಂಡರು! ನಿಜವಾಗಿ ಅಂದು ತುಂಬಿದ್ದ ಆ ಬೋರ್ಡು ಆಗ ತಾನೆ ಕುರುಕ್ಷೇತ್ರ ಯುದ್ಧ ಮುಗಿದ ರುದ್ರಭೂಮಿಯಂತೆ ಕಾಣುತಿತ್ತು! ಅದರ ತುಂಬಾ ಚೆಲ್ಲಾಡಿದ್ದ ಥೀಟಾ, ಬೀಟಾ, ಗಾಮಾಗಳು ಯುಧ್ಧದಲ್ಲಿ ಹತರಾದ ಸೈನಿಕರಂತೆ, ಇನ್ನು ಕೆಲವು ದೊಡ್ಡ ದೊಡ್ಡ ಡೆಲ್ಟಾಗಳು ತಲೆಕೆಳಕಾಗಿ ಬಿದ್ದ ಕುದುರೆ, ಆನೆಗಳಂತೆ ಕಂಡವು! ಆ ಭಯಾನಕ ದೃಶ್ಯವನ್ನು ಅರಗಿಸಿಕೊಳ್ಳುವಷ್ಟರಲ್ಲಿ "ಸಾರ್ ಒಂದ್ ಕೊಶೆನ್" ಎಂದು ನಮ್ಮ ಬೆಂಚಿನ ಕೊನೆಯಲ್ಲಿದ್ದ ಪವನ್ ಕೈ ಎತ್ತಿದ್ದ. ಸಧ್ಯ ಪಾಠ ಮುಗೀತು ಎಂದು ಸಂತಸದಲ್ಲಿದ್ದ ನಾನು ಬೇಸರದಿಂದ ತಿರುಗಿ ನೋಡಿದೆ... ನಮ್ಮ ಬೆಂಚಿನಲ್ಲಿದ್ದ ಐದೂ ಜನ ಮೇಧಾವಿಗಳು ನನಗೆ ಪಂಚ ಪಾಂಡವರಂತೆ ಗೋಚರಿಸಿದರು! ಮಹಾಭಾರತದ ಯುಧ್ಧಭೂಮಿಗೆ ಪಂಚಪಾಂಡವರು ಒಬ್ಬರಾದ ಮೇಲೆ ಒಬ್ಬರು ಇಳಿದು ಬಂದಂತೆ ಒಬ್ಬರಾದ ಮೇಲೆ ಒಬ್ಬರು ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಎದ್ದೆದ್ದು ಪ್ರಶ್ನೆ ಕೇಳುತ್ತಿದ್ದರೆ ನನಗೆ ಅವರೆಲ್ಲರೂ ಭೀಷ್ಮನೆಡೆಗೆ ಬಾಣ ಪ್ರಹಾರ ಮಾಡುತ್ತಿದ್ದಂತೆ ತೋರಿತು! 

 ಭೀಷ್ಮನೋ ನೋಡು ನಿನ್ನ ಆಪ್ತ ಸೈನಿಕ ಇಲ್ಲಿ ಸತ್ತು ಬಿದ್ದಿದ್ದಾನೆ.... ನಿನ್ನ ಮೆಚ್ಚಿನ ಅನೆ ಇಲ್ಲಿ ಸತ್ತು ಬಿದ್ದಿದೆ ಎಂದು ಬೋರ್ಡಿನ ಮೇಲಿನ ಬೀಟಾ, ಗಾಮಾ, ಡೆಲ್ಟಾಗಳ ಕಡೆ ಕೈ ತೋರಿ ತೋರಿ ಅವರನ್ನು ಹೆದರಿಸಿ ಕೂರಿಸುತ್ತಿದಂತೆ ಅನ್ನಿಸುತ್ತಿತ್ತು! ಕೊನೆಯವನು ಸಮಾಧಾನ ಪಟ್ಟುಕೊಂಡು ಕುಳಿತ ತಕ್ಷಣ ಎಂದಿನಂತೆ  45 ನಿಮಿಷ ತಡವಾಗಿ ಬಂದ ಸೀನ ಬಾಗಿಲಲ್ಲಿ  ಪ್ರೊಫ಼ೆಸ್ಸರ್ ಮುಖನೋಡುತ್ತಾ ನಿಂತ... ನನಗೆ ಆಶ್ಚರ್ಯ, ಅರೆರೆ ಈ ಚಕ್ರವ್ಯೂಹ ಭೇದಿಸಲು  ಸಜ್ಜಾಗಿ ಬಂದಿಹನಲ್ಲಾ ಈ ಅಭಿಮನ್ಯು! ಭಲೇ!

Wednesday, January 15, 2014

ಹಳ್ಳಿ ಹಳ್ಳಿಗೆ ಸ್ನೇಹ ಮತ್ತು ಸಹಾಯ



12th January 2014 ಅಂತರ್ಜಾಲದ ಸಮಾಜಮುಖಿ ಚಟುವಟಿಕೆಗಳಿಗೆಂದೇ ಸ್ಥಾಪನೆಗೊಂಡ "ಸ್ನೇಹ ಸಹಾಯ ಸಂಘ" ಎಂಬ ಸಮುದಾಯದ ವತಿಯಿಂದ ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸೌಲಭ್ಯಗಳ ಹಾಗು ಶಿಕ್ಷಕರ ಕೊರತೆಗಳಿಂದ ಬಳಲುತ್ತಿರುವ ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಹಾಗು ಸುಲಭ ಕಲಿಕೆಗೆ ಅನುವು ಮಾಡಿಕೊಡಲು ಅಂಥ ಶಾಲೆಗಳನ್ನು ಗುರುತಿಸಿ ಅವಕ್ಕೆ ಎಜುಸ್ಯಾಟ್ ಎಂಬ ಉಪಗ್ರಹ ಶಿಕ್ಷಣ ಸೌಲಭ್ಯದ ಉಪಕರಣಗಳನ್ನು ಕೊಡುಗೆಯಾಗಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಙ್ಞಾನವಿ ಗ್ರಾಮೀಣ ಅಭಿವೃದ್ಧಿ ತಂಡ ಎಂಬ ಸಂಘದ ಜೊತೆ ಕೈಜೋಡಿಸಿ ಸ್ನೇಹ ಸಹಾಯ ಸಂಘ ನೆರವೇರಿಸಿದ ಕಾರ್ಯಕ್ರಮ ಇದಾಗಿತ್ತು.

 ಸುಮಾರು ಐವತ್ತು ಜನರಿಂದ ಸಂಗ್ರಹಿಸಿದ ಇಪ್ಪತ್ತೈದು ಸಾವಿರ ರೂಪಾಯಿಗಳು ಸ್ನೇಹ ಸಹಯ ಸಂಘದ ಕೊಡುಗೆಯಾದರೆ ಇನ್ನು ಇಪ್ಪತೈದು ಸಾವಿರ ರೂಪಾಯಿಗಳು ಮತ್ತೊಂದು ಕಂಪನಿಯಿಂದ ಬಂದು ಒಟ್ಟು ಅಂದಾಜು ಐವತ್ತು ಸಾವಿರ ರೂಪಾಯಿಗಳಲ್ಲಿ  Dish Antenna, T.V. , Set Top box, UPS , Speakers ಇಷ್ಟನ್ನು ಕೊಡುಗೆ ನೀಡಲಾಯಿತು.

ಏನಿದು ಎಜುಸಾಟ್?

Edusat ಎಂದರೆ  Educational Satellite  ಎನ್ನುವುದರ ಸಂಕ್ಷಿಪ್ತ ರೂಪ.  20th September 2004 ರಂದು ಉಡಾವಣೆಗೊಂಡ  ISRO ದ ಸಂಪರ್ಕ ಉಪಗ್ರಹ GSAT-3 ಎಂಬುದರ ಇನ್ನೊಂದು ಹೆಸರೇ  EDUSAT. ಇದು ಸಂಪೂರ್ಣ ಶೈಕ್ಷಣಿಕ ಉದ್ದೇಶಕ್ಕಾಗಿಯೇ ಉಡಾಯಿಸಲಾದ ದೇಶದ ಮೊಟ್ಟ ಮೊದಲನೆಯ ಉಪಗ್ರಹ. ಕುಗ್ರಾಮಗಳಲ್ಲಿ ಕೂಡ ಉಪಗ್ರಹದ ಮುಖಾಂತರ ಶೈಕ್ಷಣಿಕ ವಿಷಯಗಳ ಬಗ್ಗೆ ಪಾಠಗಳನ್ನು ಟಿವಿ ವಾಹಿನಿಗಳಂತೆ ಪ್ರಸಾರ ಮಾಡಬಹುದು. ಆ ಮೂಲಕ ದೇಶದ ಯಾವುದೇ ಮೂಲೆಯಲ್ಲಿದ್ದರೂ ವಿದ್ಯಾರ್ಥಿಗಳಿಗೆ ಉತ್ತಮಮಟ್ಟದ ಶಿಕ್ಷಣ ಒದಗಿಸಲು ಬಹಳ ಉಪಯೋಗಕಾರಿ ಯೋಜನೆಯಿದು. ಈ GSAT-3 ಎಂಬ ಉಪಗ್ರಹವು ಈ ಹೊಸ ರೀತಿಯ ಶಿಕ್ಷಣ ಸೇವೆಯನ್ನು ಉಪಸ್ಥಿತಿಗೆ ತಂದಿತಾದರೂ 2010ರಲ್ಲಿ ತನ್ನ ಜೀವಾವಧಿ ಮುಗಿಸಿತು. ಇಂದಿನ ದಿನ ISRO ತನ್ನ ಇತರೆ ಹೊಸ ಉಪಗ್ರಹಗಳ ಮುಖಾಂತರ EDUSAT ಎಂಬ ಹೆಸರಿನಲ್ಲಿಯೇ ಈ ಉಪಗ್ರಹ ಶಿಕ್ಷಣ ಸೇವೆಯನ್ನು ಮುಂದುವರಿಸಿದೆ.

ಎಜುಸ್ಯಾಟ್ ಸೌಲಭ್ಯ ಪಡೆಯಲು ಏನೇನು ಬೇಕು?

ಎಜುಸ್ಯಾಟ್ ಉಪಕರಣಗಳನ್ನು ಮಾರಾಟ ಮಾಡುವ ಬಹಳಷ್ಟು ಕಂಪೆನಿಗಳು ಗೂಗಲ್ ಸರ್ಚ್ ಮಾಡಿದರೆ ಸಾಕು ಸಿಗುತ್ತವೆ. One-way Broadcasting ಅಂದರೆ ಉಪಗ್ರಹದಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಟಿವಿ ವಾಹಿನಿಯಂತೆ ನೋಡಲು Dish Antenna, T.V. , Set Top box ಇದ್ದರೆ ಸಾಕು.  Interactive TV, video conferencing, computer conferencing, web-based instructions ಹೀಗೆ ಈ ಉಪಗ್ರಹದಿಂದ ಇನ್ನೂ ಅನೇಕ ಸೌಲಭ್ಯಗಳನ್ನು ಪಡೆಯಬಹುದಾದ ಸಾಧ್ಯತೆಗಳುಂಟು ಆದರೆ ಅವಕ್ಕೆ ಇನ್ನು ಆಧುನಿಕ ಉಪಕರಣಗಳು ಬೇಕಾಗುವವು ಹಾಗು ವೆಚ್ಚ ಹೆಚ್ಚಾಗುವವು.

ಮುಂದಿನ ಯೋಜನೆಗಳು...

ವರುಷಕ್ಕೆ ಕನಿಷ್ಠ ಎರಡು ಬಾರಿ ಗ್ರಾಮೀಣ ಅಭಿವೃದ್ಧಿ ಕೆಲಸಗಳನ್ನು ಮಾಡಲೇಬೇಕೆಂಬುದು ಸ್ನೇಹ ಸಹಾಯ ಸಂಘದ ಧ್ಯೇಯವಾಗಿದೆ. ಅಂತಹ ಕಾರ್ಯಕ್ರಮಗಳ ಸಾಲಿನಲ್ಲಿ ಕೂನನಕೊಪ್ಪಲು ಕಾರ್ಯಕ್ರಮ ಏಳನೆಯದಾಗಿದೆ. ಇದೇ ವರ್ಷದ ದ್ವಿತೀಯಾರ್ಧದಲ್ಲಿ ಮತ್ತೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಉತ್ಸಾಹದಲ್ಲಿದ್ದಾರೆ ತಂಡದ ಮುಂದಾಳುಗಳಾದ ಮಹೇಶ್ ಗೌಡ, ದಿವ್ಯಾ ಶ್ರೀ ಹಾಗು ರಮೇಶ್ ಅವರು. ಅವರ ಈ ಮಹತ್ಕಾರ್ಯಗಳಿಗೆ ಅಭಿನಂದನೆಗಳನ್ನು ಹೇಳುತ್ತ ಕಾರ್ಯಕ್ರಮದ ಸಫಲತೆಗೆ ಕೈ ಜೋಡಿಸಿದ ಹಾಗೂ ಪ್ರಯಾಣಕ್ಕೆ ಜೊತೆಯಾದ ಎಲ್ಲ ಮಿತ್ರ ವೃಂದದವರಿಗೂ ನನ್ನ ನಮನಗಳು.

ಕೂನನಕೊಪ್ಪಲು ಭಾಗದ ವಿದ್ಯಾರ್ಥಿಗಳ ಬಾಳು ಶೀಘ್ರವೇ ಬೆಳಗಲಿದೆ. ಅವರ ಕಲಿಕೆಗೆ ಅಡ್ಡವಾಗಿದ್ದ ಕಷ್ಟ ಕೋಟಲೆಗಳು ಶೀಘ್ರವೇ ಮುಗಿಯಲಿದೆ. ಕಾರಣ ಅವರಿಗಾಗಿ ಹಾಗು ಸುತ್ತಮುತ್ತಲಿನ ಹಳ್ಳಿಯವರಿಗಾಗಿ ಙ್ಞಾನವಿ ತಂಡದಿಂದ ಹಾಗು ಸರಕಾರಿ ಅಧಿಕಾರಿಗಳ ನೆರವಿನಿಂದ ಅಲ್ಲಿ ಆಧುನಿಕ ಸೌಲಭ್ಯಗಳುಳ್ಳ ಒಂದು ಹೊಸ ಶಾಲೆ ಹೊಸ ಕಟ್ಟಡ ನಿರ್ಮಾಣ ಆಗುತ್ತಿದೆ ಎಂಬುದು ಅತ್ಯಂತ ಸಂತೋಷಕರ ವಿಷಯ!


 Facebookನಲ್ಲಿ ಸ್ನೇಹ ಸಹಾಯ ಸಂಘವನ್ನು ಸೇರಲು ಕ್ಲಿಕ್ಕಿಸಿ...

https://www.facebook.com/groups/snehasahayasangha/ 


ಬೆಳಗಲಿ ಬೆಳೆಯಲಿ ಗ್ರಾಮೀಣ ಭಾರತ
ಸ್ನೇಹ ಸಹಾಯ ಸಂಘಕ್ಕೆ ನಿಮಗೆಲ್ಲ ಸುಸ್ವಾಗತ