Wednesday, May 2, 2012

DESIRE Society - ಅನಾಥಾಶ್ರಮದಲ್ಲೊಂದು ಸಂಭ್ರಮ

ಮೇ ಒಂದು, ಕಾರ್ಮಿಕರ ದಿನ. ರಜೆ ಒಂದನ್ನು ಸದುಪಯೋಗ ಪಡಿಸಿಕೊಳ್ಳಲು ಏನೇನೋ ಮಾಡಿದ್ದುಂಟು. ಆದರೆ ರಜೆಯೊಂದನ್ನು ಈ ರೀತಿ ಸಾರ್ಥಕ ಪಡಿಸಿಕೊಂಡಿದ್ದು ಇದೇ ಮೊದಲು!


ಸತೀಶ್ ಬಿ ಕನ್ನಡಿಗ ಅವರ ಸಾರಥ್ಯದಲ್ಲಿ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಎಂಬ ಅನಾಥಾಶ್ರಮದಲ್ಲಿ ಒಂದು ಸುಂದರ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದ ಮೂಲಕ ಕ್ಷಣ ಕಾಲ ಈ ವಿಶಿಷ್ಟ ಮಕ್ಕಳ ನೋವು ನಲಿವುಗಳಲ್ಲಿ ಭಾಗಿಯಾಗುವ ಭಾಗ್ಯ ನನ್ನದಾಯಿತು.

ಎಡದಿಂದ ಬಲಕ್ಕೆ: ಅಶೋಕಣ್ಣ, ಕೈಯಲ್ಲಿ ಆಶ್ರಮದ ಅತ್ಯಂತ ಚೂಟಿ ಬಾಲಕ ಯಶ್ವಂತ್ ಹಿಡಿದು ನಾನು, ಜ್ಯೋತಿ ಅಕ್ಕ, 3K ಅಧ್ಯಕ್ಷೆ ರೂಪಕ್ಕ

DESIRE Society ಎಂಬುದು HIV/AIDS ರೋಗವಿರುವ ಮಕ್ಕಳಿಗೆ ಬಾಳ ದೀಪ ಆರುವ ಮುನ್ನ ಹೊಸ ಬೆಳಕು ತೋರಿಸುವಂತಹ ಒಂದು ಉತ್ತಮ NGO ಆಗಿದೆ. ಇಂದು ಈ ಸಂಸ್ಥೆಯು ಇಂದು ಆಂಧ್ರಪ್ರದೇಶ, ತಮಿಳುನಾಡು ಹಾಗು ಕರ್ನಾಟಕದ ಹಲವು ಊರುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಈ ಶಾಖೆಯಲ್ಲಿ 25 ಜನ ಮಕ್ಕಳಿದ್ದಾರೆ. ಈ ಮಕ್ಕಳಿಗೆ ಬರುವ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಮುಂತಾದ ಅನೇಕ ಸಾಮಗ್ರಿಗಳನ್ನು ವಿತರಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂತರ್ಜಾಲದ ಪ್ರಸಿದ್ಧ ಸಾಮಾಜಿಕ ತಾಣವಾದ ಸ್ನೇಹಲೋಕ, ನನ್ನ ನುಡಿ ಕನ್ನಡ, 3K ಮುಂತಾದ ಅನೇಕ ಗುಂಪಿನ ಸದಸ್ಯರು ಪಾಲ್ಗೊಂಡಿದ್ದರು. ಎಲ್ಲರೂ ಸೇರಿ ಅಂದಾಜು 50,000 ರೂಪಾಯಿಯ ವರೆಗೆ ಹಣ ಸಂಗ್ರಹಿಸಿ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಲನಚಿತ್ರದ ನಿರ್ದೇಶಕರಾದ ಶಶಿಕಾಂತ್ ಹಾಗು ಪ್ರಸಿದ್ಧ ಸಂಗೀತ ಸಂಯೋಜಕರಾದ ಮಣಿಕಾಂತ್ ಕದ್ರಿಯವರು ಹಾಜರಿದ್ದರು. ನಮ್ಮೆಲ್ಲರ ಮೆಚ್ಚಿನ ಅಶೋಕ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸುಂದರ ಕಾರ್ಯಕ್ರಮದ ಕೆಲವು ಸ್ಮರಣೀಯ ದೃಶ್ಯಗಳ ಮೆಲುಕು ಇಲ್ಲಿದೆ ನಿಮಗಾಗಿ...



ಹೊತ್ತಿ ಉರಿಯುವ ಆವೇಗದಲಿ

ಧಗಧಗನೆ ಉರಿಯಿತಾ ದೀಪ

ಉರಿದು ಬಾಳ ಮುಗಿಸಿತು ಬಹುಬೇಗ

ಮನೆಯಂಗಳದ ಕತ್ತಲೆ ಕರಗಲಿಲ್ಲ!



ಬಸಿರೊಳಗಿನ ಎಳೆ ಬತ್ತಿಯ ಬದುಕೂ

ಬೆಳಗುವ ಮುನ್ನವೇ ಸುಟ್ಟು ಕಪ್ಪಾಯಿತಲ್ಲ,

ಎಲ್ಲರಂತೆ ಬೆಳೆದು ಜಗ ಬೆಳಗುವಾಸೆ ಅದಕೂ

ಈ ದೀಪಗಳಲ್ಲಿನ್ನು ಹೆಚ್ಚು ಇಂಧನ ಉಳಿದಿಲ್ಲ!



ಮಕ್ಕಳು ತಮ್ಮ ಮನೋರಂಜನಾ ಕಾರ್ಯಕ್ರಮಕ್ಕೆ ಬಣ್ಣ ಬಣ್ಣದ ಹೊಸ ಬಟ್ಟೆ ಧರಿಸಿ ಸಂತೋಷವಾಗಿ ಸಜ್ಜಾಗಿ ಕುಳಿತ್ತಿದ್ದಾರೆ. ನಮ್ಮ 3K ಜನನಿ ರೂಪಕ್ಕ ಮಕ್ಕಳಿಗೆ ಮೇಕಪ್ ಮಾಡುವುದರಲ್ಲಿ ವ್ಯಸ್ತವಾಗಿದ್ದಾರೆ.



ಕೈಯಲ್ಲಿ ಕನ್ನಡಿ ಹಿಡಿದು ಕಾರ್ಯಕ್ರಮಕ್ಕೆ ಸಿಧ್ಧತೆ ನಡೆಸಿದ್ದ ಪುಟ್ಟ ಪೋರಿಯೊಬ್ಬಳು ನನ್ನ ಕ್ಯಮೆರಾ ಕಣ್ಣಿಗೆ ಕಂಡಿದ್ದು ಹೀಗೆ
ಹಿಡಿದಿರುವೆ ಪುಟ್ಟ ಕೈಗಳಲ್ಲಿ ಪುಟ್ಟದೊಂದು ಕನ್ನಡಿ
ಬಣ್ಣ ಬಣ್ಣದ ಭವಿಷ್ಯಕೀಗಲೇ ಬರೆಯುವಾಸೆ ಮುನ್ನುಡಿ

ಕೆಂಪು, ನೀಲಿ, ಹಸಿರು, ಹಳದಿ ನೋಡು ಎಷ್ಟು ಬಣ್ಣ
ಬಣ್ಣ ಹಚ್ಚಿ ಕುಣಿಯಬೇಕು ಉಡುಗೊರೆ ಕೊಡುವರಣ್ಣ

ವರುಷಕೊಮ್ಮೆ ಅಷ್ಟೆ ಹೀಗೆ ಬರುವುದು ಒಳ್ಳೇ ದಿನ, ಒಳ್ಳೇ ಜನ,
ಕನ್ನಡಿ ಮುಚ್ಚಿ ಎತ್ತಿಟ್ಟರೆ ಇಂದು ಮತ್ತೆ ಕಪ್ಪು ಬಿಳುಪು ಜೀವನ!

"ಮರಳಿ ಮರೆಯಾಗಿ... ತೆರಳಿ ತೆರೆಯಾಗಿ ಹೋದೆವು ನಾವುಗಳು ಬಾಲ್ಯದ ದಿನಗಳಿಗೆ ಈ ಮಕ್ಕಳೊಡನೆ ತುಂಟಾಟವಾಡುತಾ..."
ಎಡದಿಂದ ಬಲಕ್ಕೆ: "ಬಾಲ್‍ಪೆನ್" ಚಲನಚಿತ್ರದ ತಂಡದ ರಾಜೇಶ್, ನಿರ್ದೇಶಕ ಶಶಿಕಾಂತ್, ಖ್ಯಾತ ಸಂಗೀತ ಸಂಯೋಜಕ ಮಣಿಕಾಂತ್ ಕದ್ರಿ ಅವರೊಂದಿಗೆ ನಾನು, ಜಗನ್, ರೂಪಕ್ಕ, ಅಶೋಕ್, ಸತೀಶ್ ಬಿ ಕನ್ನಡಿಗ
ಕಾರ್ಯಕ್ರಮಕ್ಕೆ ನೂರಾರು ಜನ ಹಾಜರಿದ್ದರು

ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭ


ಎಡದಿಂದ ಬಲಕ್ಕೆ: "ಬಾಲ್‍ಪೆನ್" ಚಲನಚಿತ್ರದ ತಂಡದ ರಾಜೇಶ್, ನಿರ್ದೇಶಕ ಶಶಿಕಾಂತ್, ಖ್ಯಾತ ಸಂಗೀತ ಸಂಯೋಜಕ ಮಣಿಕಾಂತ್ ಕದ್ರಿ, ನಮ್ಮೆಲ್ಲರ ಮೆಚ್ಚಿನ ಗೆಳೆಯ ಅಶೋಕ್ ಶೆಟ್ಟಿ ಹಾಗು DESIRE Societyಯ ಅಧ್ಯಕ್ಷರಾದ ಸುಭಾಶ್  

ಕಾರ್ಯಕ್ರಮ ವೀಕ್ಷಿಸಲು ವೇದಿಕೆಯ ಎದುರು ಬಂದು ಕುಳಿತ ಆಶ್ರಮದ ಮಕ್ಕಳು

"ಸಂಜೆ ನಸುಕಿನಲಿ ಮಳೆ ಹುಯ್ಯಲಿ..." ಎಂದು ಸುಮಧುರವಾಗಿ ಹಾಡಿದರು ನಮ್ಮ ಸತೀಶ್ ನಾಯಕ್. ಅವರ ಹಾಡಿಗೆ ವರುಣದೇವನು ಒಲಿದೇ ಬಿಟ್ಟನು! ಅಂದು ಸಂಜೆ ಎಲ್ಲೆಡೆ ಜೋರು ಮಳೆ! ನಾವೆಲ್ಲ ನೆನೆದು ಮನೆ ಸೇರಿದೆವು!

ವೇದಿಕೆಯ ಮುಂದೆ ಕುಳಿತಿದ್ದ ಮಕ್ಕಳನ್ನು ಕಂಡು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಶಿಕಾಂತ್ ಅವರು "ಇದು ಈ ಮಕ್ಕಳಿಗಾಗಿ ನಡೆಯುತ್ತಿರುವ ಕಾರ್ಯಕ್ರಮ.. ಅವರು ಕೂರಬೇಕಾದ್ದು ವೇದಿಕೆಯ ಕೆಳಗಲ್ಲ ವೇದಿಕೆಯ ಮೇಲೆ ಎಂದು ಹೇಳಿ ಮಕ್ಕಳನ್ನು ಮೇಲೆ ಕರೆದು ಅತಿಥಿಗಳಿಗೆಂದು ಹಾಕಿಸಲಾಗಿದ್ದ ಕುರ್ಚಿಗಳ ಮೇಲೆ ಕೂರಿಸಿದರು! ಕಾರ್ಯಕ್ರಮದ ಮುಖ್ಯ ಅತಿಥಿಗಳೂ ಅಧ್ಯಕ್ಷರೂ ಸ್ವತಃ ಆ ಮಕ್ಕಳ ಹಿಂದಿನ ಸಾಲಿನಲ್ಲಿ ಕುಳಿತರು

ಮಕ್ಕಳನ್ನು ಕರೆದು ವೇದಿಕೆಯ ಮೇಲೆ ಕೂರಿಸಿದ ತಕ್ಷಣವೇ ತಮ್ಮ ಹೊಸ ಚಿತ್ರದ ಹಾಡೊಂದನ್ನು ಹಾಕಿಸಿದರು ನಮ್ಮ ಶಶಿಕಾಂತ್... ಅದೇ ಬಾಲ್‍ಪೆನ್ ಚಿತ್ರದ "ಇದು ಯಾರ ಭುವಿ, ಇದು ಯಾರ ನದಿ..." ಎಂಬ ಮಕ್ಕಳೇ ಹಾಡಿರುವ ಮಧುರ ಗೀತೆ. ಇದು ಒಂದು ಅನಾಥಾಶ್ರಮದ ಮಕ್ಕಳ ಮೇಲೆ ಚಿತ್ರೀಕರಣಗೊಂಡಿರುವ ಹಾಡು... ಅದ್ಭುತ ಸಂದೇಶ ಹೊಂದಿರುವ ಈ ಹಾಡನ್ನು ಕೇಳಿದ ಕೂಡಲೇ ಮನ ಕರಗಿತು. ಆ ಹಾಡಿಗೂ ಅಂದಿನ ಸನ್ನಿವೇಶಕ್ಕೂ ಬಹಳ ಹೋಲಿಕೆಯಿತ್ತು! ಒಂದು ಕ್ಷಣ ಕಣ್ಣು ಹಸಿಯಾಯಿತು!


ಇದೇ ಆ ಹಾಡು...

ಉಡುಗೊರೆಗಳನ್ನು ಪಡೆಯಲು ವೇದಿಕೆಯ ಮೇಲೆ ಬಂದ ಪುಟ್ಟ ಪೋರ ಯಶ್ವಂತ್ ಶಶಿಕಾಂತ್ ಅವರ ಕೋರಿಕೆಯ ಮೇರೆಗೆ ತನ್ನ ಕರಾಟೆ ಪ್ರತಿಭೆ ಪ್ರದರ್ಶಿಸಿದನು.
ಉಡುಗೊರೆ ಪಡೆದ ಪುಟಾಣಿಗಳ ಮುಖದಲ್ಲಿ ಸಂತೋಷದ ನಗೆ ತುಂಬಿತ್ತು.. ಮಕ್ಕಳು ನಕ್ಕರೆ ಹಾಲು ಸಕ್ಕರೆ.. ನಿಜ..
ಜ್ಯೋತಿ ಅಕ್ಕ ಅವರಿಂದ ಉಡುಗೊರೆ ವಿತರಣೆ
"ಬೋರ್ಡು ಇರದ ಬಸ್ಸನು ಏರಿ ಬಂದ.. ಪಂಕಜ" ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ. ಇವರು ಜ್ಯೋತಿ ಅಕ್ಕನವರ ಮಕ್ಕಳು.
"ಖುಷಿಯಾಗಿದೆ ಏಕೋ ನಿಮ್ಮಿಂದಲೇ..." ಎಂದು ಕುಣಿದು ಕುಪ್ಪಳಿಸಿದ ಮಕ್ಕಳು


ಮತ್ತೆ ಎಲ್ಲರ ಕೈಯಲ್ಲಿ ಮಿಂಚಿದ "ಭಾವಸಿಂಚನ"- 3K ತಂಡದ ಮೊದಲ ಕವನ ಸಂಕಲನ
Autograph Time...
With Manikanth Kadri Sir
With Director Shashikant and Rajesh
ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆಯೂ ಚೆನ್ನಾಗಿತ್ತು
ಕಾರ್ಯಕ್ರಮ ಮುಗಿದ ಕೂಡಲೆ ನಮ್ಮ ಅಶೋಕಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ಅವರ ಹಳೆಯ ಗೆಳೆಯ ಸತ್ಯ(ಸತೀಶ್) ಅವರಿಗಾಗಿ ಕೇಕ್ ವ್ಯವಸ್ಥೆ ಮಾಡಿದ್ದರು
The Karate Kid - ಯಶ್ವಂತ್ ಎಲ್ಲರಿಗೂ ಬಹಳ ಇಷ್ಟವಾಗುವವನು
ಕಾರ್ಯಕ್ರಮವೆಲ್ಲಾ ಮುಗಿದು ಹೊರಡುವ ಸಮಯದಲ್ಲಿ ಸತೀಶ್ ಬಿ ಕನ್ನಡಿಗ ಅವರನ್ನು ಹುಡುಕಿದರೆ ಅವರು ಎಲ್ಲೂ ಕಾಣದಾದರು. ಕೊನೆಗೆ ಆಶ್ರಮದ ಹಿಂಭಾಗದ ಮರದಡಿ ಒಬ್ಬರೇ ಕುಳಿತಿರುವುದು ಕಣ್ಣಿಗೆ ಬಿತ್ತು. ಅವರು ಭಾವುಕತೆಯಿಂದ ತುಂಬಿದ್ದ ಕಣ್ಣುಗಳನ್ನು ಒರೆಸಿಕೊಂಡು ನಮ್ಮನೆಲ್ಲಾ ಬೀಳ್ಕೊಟ್ಟರು. ಅವರು ಅಂದು ವೇದಿಕೆಯ ಮೇಲೆ ಹಂಚಿಕೊಂಡ ತಮ್ಮ ಜೀವನದ ಕೆಲವು ಸಿಹಿ-ಕಹಿ ಘಟನೆಗಳ ನೆನಪುಗಳು, ಅವರ ಮೆಚ್ಚಿನ "ಅರಳುವ ಹೂವುಗಳೇ.." ಹಾಡು, ಅವರ ಮುಂದಿನ ಧ್ಯೇಯ, ಇವೆಲ್ಲವನ್ನು ಕಂಡು ನನ್ನ ಹೃದಯವೂ ಕರಗಿ ಮನಸ್ಸಲ್ಲೇ ಅವರಿಗೊಂದು ದೊಡ್ಡ ಸಲಾಮ್ ಹೇಳಿತು.

ಒಟ್ಟಿನಲ್ಲಿ ಜೀವನದಲ್ಲೇ ಎಂದೂ ಕಂಡಿಲ್ಲದಂತಹ ಒಂದು ಹೊಸ ರೀತಿಯ ಹೃದಯ ಮಿಡಿಯುವಂತಹ ಅನುಭವ ನಮ್ಮದಾಯಿತು. ಅಬ್ಬಾ ಎಂತಹ ವಿಶಿಷ್ಟ ದಿನ ಅದು!

Sunday, April 22, 2012

3K ಕಾವ್ಯ ಸಂಚಾರ-2 ಮೈಸೂರು

ಬ್ಲಾಗ್ ಲೋಕದ ಗೆಳೆಯರೇ,



ನಮಸ್ಕಾರಗಳು. ಬಹಳ ದಿನಗಳಿಂದ ಅನೇಕ ಕಾರಣಗಳಿಂದಾಗಿ ನಾನು ನಿಮ್ಮ ಬ್ಲಾಗ್ ಕಡೆಗೂ ಬರಲಾಗಿಲ್ಲ... ನನ್ನ ಬ್ಲಾಗಿನಲ್ಲೂ ಯಾವುದೇ ಹೊಸ ವಿಷಯಗಳಿಲ್ಲ. ಕ್ಷಮಿಸಬೇಕು. ಇನ್ನೂ ಕೆಲವು ದಿನ ನಾನು ಇದೇ ಸ್ಥಿತಿಯಲ್ಲಿರಬೇಕಾಗುವುದು ಖಂಡಿತ. ಆದರೆ ಈ ಕೆಲಸ ಕಾರ್ಯಗಳ ನಡುವೆ ಮರೆಯಲಾಗದ ಕೆಲವು ಸಿಹಿ ಕ್ಷಣಗಳು ಬಂದಾಗ, ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳದಿರಲು ಆಗುವುದಿಲ್ಲ. ಅಂಥದ್ದೇ ಒಂದು ಸಿಹಿ ಸವಿ ನೆನಪುಗಳ ನಿಧಿಯನ್ನು ಹೊತ್ತು ತಂದಿದ್ದು ನಮ್ಮ "ಕಾವ್ಯಸಂಚಾರ-೨ ಮೈಸೂರು"

ಈಗಾಗಲೇ ನಾನು ತಿಳಿಸಿರುವಂತೆ ಕಾವ್ಯಸಂಚಾರ ಎಂಬುದು " 3K - ಕನ್ನಡ ಕವಿತೆ ಕವನ" ಎಂಬ ಅಂತರ್ಜಾಲದ ಕವಿಗಳ ಸಂಘ ರೂಪಿಸಿರುವ ಹೊಸ ಯೋಜನೆ. ಕಾವ್ಯಸಂಚಾರದಲ್ಲಿ ನಮ್ಮ ತಂಡ ಬೇರೆ ಬೇರೆ ಊರುಗಳಿಗೆ ಸಂಚರಿಸಿ ಕವಿಗೋಷ್ಠಿ ನಡೆಸುವುದು. ಅಲ್ಲಿನ ಸುತ್ತಮುತ್ತಲಿನ ಊರುಗಳಲ್ಲಿರುವ ಪ್ರತಿಭಾನ್ವಿತ ಕವಿಗಳನ್ನು ಕರೆಸಿ ಕಾವ್ಯವಾಚನ ಮಾಡಿಸುವುದು. ಹೆಸಾರಾಂತ ಕವಿಗಳಿಗೆ, ಸಾಹಿತಿಗಳಿಗೆ ಸನ್ಮಾನ ಮಾಡುವುದು, ಅವರ ಆಶೀರ್ವಾದ ಹಾಗು ಸಲಹೆಗಳು ನಮ್ಮ ಗುಂಪಿನ ಎಳೆಯ ಉದಯೋನ್ಮುಖ ಕವಿಗಳಿಗೆ ತಲುಪುವಂತೆ ಮಾಡುವುದು ಇವೇ ಮುಂತಾದವು ಕಾವ್ಯಸಂಚಾರದ ಮುಖ್ಯ ಉದ್ದೇಶ.

ಕಳೆದ ಬಾರಿ ಮಂಗಳೂರಿಗೆ ಸಂಚರಿಸಿದ್ದ ನಾವು ಅಲ್ಲಿನ ಖ್ಯಾತ ಸಾಹಿತಿಗಳಾದ ಕು.ಗೋ. ಅವರನ್ನು ಭೇಟಿಯಾಗಿ ಸನ್ಮಾನಿಸಿ ಅವರ ಆಶೀರ್ವಚನಗಳನ್ನು ಪಡೆದಿದ್ದೆವು. ಈ ಬಾರಿ ನಾವು ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಅಂದಿನ ದಿನದ ಕೆಲವು ಸವಿ ಕವಿ ಕ್ಷಣಗಳ ನೆನೆಪು ಇಲ್ಲಿವೆ.

11 ಮಾರ್ಚ್ 2012 ರಂದು ಮೈಸೂರಿನ ಸಭಾಂಗಣದಲ್ಲಿ ನಮ್ಮ ತಂಡ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕವಿಗೋಷ್ಠಿ ನಡೆಸಿತು. ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಅರಸ್ ಅವರ ಸಂಪೂರ್ಣ ಸಹಕಾರದಿಂದಲೇ ಇದು ಸಾಧ್ಯವಾಗಿದ್ದು. ಅವರಿಗೆ ನಮ್ಮ ತಂಡ ಚಿರಋಣಿ. ಈ ಕವಿಗೋಷ್ಠಿ ನಡೆಯಲು ಮುಖ್ಯ ಉದ್ದೇಶ ಅಲ್ಲಿನ ಹಿರಿಯ ಸಾಹಿತಿ, ಚುಟುಕು ರತ್ನ ಡಾ. ಎಂ ಅಕ್ಬರ್ ಅಲಿ ಅವರ 88ನೇ ಜನ್ಮ ದಿನಾಚರಣೆ ಹಾಗು ಸರ್ವಙ್ಞನ ವಚನಗಳ ಬಗ್ಗೆ ಅವರ ಸಂಶೋಧನಾ ಕೃತಿಯ ಬಿಡುಗಡೆ. ಚುಟುಕು ಸಾಹಿತ್ಯಕ್ಕೆ ಡಾ. ಅಕ್ಬರ್ ಅಲಿ ಅವರ ಕೊಡುಗೆ ಅಪಾರ. ಮುಸ್ಲಿಮ್ ಸಂವೇದನೆಯ ಹಿನ್ನೆಲೆಯಲ್ಲಿ ಕನ್ನಡದ ಅನನ್ಯ ಶೈಲಿಯನ್ನು ರೂಪಿಸಿಕೊಂಡ ಇವರು ವ್ಯಂಗ್ಯ, ವಿಡಂಬನೆ, ಕಟಕಿ, ನಿಂದೆ, ವಿನೋದ, ವಿಷಾದ, ಅನುಕಂಪ, ಕರುಣೆಗಳೇ ಮುಂತಾದವು ತುಂಬಿದ ಚುರುಕಾದ ಚುಟುಕುಗಳ ರಚನೆಯಲ್ಲಿ ದಶಕಗಳಾಚೆಯಿಂದ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ. ಅವರೊಡನೆ ವೇದಿಕೆ ಹಂಚಿಕೊಂಡು ಅವರನ್ನು ಸನ್ಮಾನಿಸುವ ಅವಕಾಶ ಪಡೆದ ನಾವೆಲ್ಲರೂ ನಿಜವಾಗಲೂ ಧನ್ಯ!



ಕಾರ್ಯಕ್ರಮಕ್ಕೂ ಮುನ್ನ ಡಾ. ಅರಸ್ ಅವರ ಜೊತೆ ಕಾಫ಼ಿ ತಿಂಡಿ

ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭ

ಡಾ. ಅಕ್ಬರ್ ಅಲಿ ಅವರ ಕೃತಿ ಬಿಡುಗಡೆ

ಡಾ. ಆರಸ್ ಅವರ ಭಾಷಣ

3K ಜನನಿ ರೂಪ ಸತೀಶ್ ಅವರಿಂದ ಡಾ. ಅಕ್ಬರ್ ಅಲಿ ಅವರ ಪುಸ್ತಕದ ಬಗ್ಗೆ ಕೆಲವು ಮಾತುಗಳು.

ಚುಟುಕು ರತ್ನ ಡಾ. ಅಕ್ಬರ್ ಅಲಿ ಅವರ ಕೈಯಲ್ಲಿ "ಭಾವಸಿಂಚನ"

ಡಾ. ಅಕ್ಬರ್ ಅಲಿ ಅವರಿಂದ ರೂಪಕ್ಕ ಅವರಿಗೆ ಸನ್ಮಾನ

ವೇದಿಕೆಯ ಮೇಲಿದ್ದ ಮುಖ್ಯ ಅತಿಥಿಗಳಿಗೆ ಸರ್. ಎಂ. ವಿಶ್ವೇಶ್ವರಯ್ಯನವರ ಪುತ್ಥಳಿ ನೆನಪಿನ ಕಾಣಿಕೆ

ಡಾ. ಅರಸ್ ಹಾಗು ಡಾ. ಅಕ್ಬರ್ ಅಲಿ ಅವರಿಗೆ ತಂಡದಿಂದ ಸನ್ಮಾನ. ಕಾರ್ಯಕ್ರಮದ ಅತ್ಯಂತ ಸ್ಮರಣಿಯ ಕ್ಷಣಗಳು

ಒಂದೇ ಕುಟುಂಬದ ಮೂರು ತಲೆಮಾರುಗಳಂತೆ ಕಾಣುವ ಈ ಚಿತ್ರ - ಡಾ. ಆಕ್ಬರ್ ಅಲಿ ಅವರೊಂದಿಗೆ ನಮ್ಮ 3K ತಂಡ

ನನಗೂ ಸಿಕ್ಕಿತು ಚುಟುಕು ಕವನ ವಾಚಿಸಲು ಒಂದು ಅವಕಾಶ. ಹಿರಿಯ ಸಾಹಿತಿಗಳ ಮುಂದೆ ವಾಚಿಸಲು ಭಯವಾಗುತಿತ್ತು. ಹೇಳಿ ಮುಗಿಸಿದ ನಂತರ ಕಾರ್ಯಕ್ರಮದ ನಿರೂಪಕಿ "ಅಂತೂ ಕೊನೆಗೆ ನೀವಾದರೂ ನಗಿಸಿದಿರಿ" ಎಂದರು. ಬಹಳ ಸಂತೋಷವಾಯಿತು!

ಸುಂದರ ಚುಟುಕುಗಳನ್ನು ಹೇಳಿ ನಗಿಸಿದರು ನಮ್ಮ ಮೇಷ್ಟ್ರು - ಶ್ರೀ ಎಸ್. ಮಂಜುನಾಥ್ ಕೊಳ್ಳೇಗಾಲ

ಇವರು ಕಾವ್ಯಸಂಚಾರದ ನಾಯಕ, ಮೂರ್ತಿ ದೊಡ್ಡದಾದರೆ ಕೀರ್ತಿ ಇನ್ನೂ ದೊಡ್ಡದು - ಶ್ರೀ ಎಸ್. ಮಹೇಶ್ ಮೂರ್ತಿ

ಮಡಿಕೇರಿಯ ಒಬ್ಬ ಪ್ರತಿಭಾವಂತ ಸಾಹಿತಿ ಪಿ. ಜಿ. ಮಹಾಬಲೇಶ್ವರ ಶರ್ಮ. ಕುತ್ತಿಗೆ ನೋವಿಗೆ ಶಸ್ತ್ರ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಇನ್ನೂ ಕಲಿಕೆಯಲ್ಲಿದ್ದ ವೈದ್ಯರುಗಳು ನೀಡಿದ ಅಸಂಬದ್ಧ ಚುಚ್ಚುಮದ್ದು ಒಂದರ ಪರಿಣಾಮವಾಗಿ ಇವರ ಸೊಂಟ ಹಾಗು ಕಾಲುಗಳು ಸ್ವಾಧೀನ ಕಳೆದುಕೊಂಡು ಇಂದು ಹಾಸಿಗೆ ಹಿಡಿದ್ದಿದ್ದಾರೆ. ಆದರೂ ಸಾಹಿತ್ಯ ಸೇವೆ ಮುಂದುವರಿಸಿದ್ದಾರೆ. ಇವರು ಬರೆದ ಚುಟುಕು ಕವನಗಳನ್ನು ಇವರ ಪುತ್ರ ಕವಿಗೋಷ್ಠಿಯಲ್ಲಿ ಓದಿದರು. 3K ತಂಡದಿಂದ ಅವರ ಚಿಕಿತ್ಸೆಗೆ ಸ್ವಲ್ಪ ಧನಸಹಾಯವನ್ನೂ ಮಾಡಲಾಯಿತು.


ಕವನ ವಾಚಿಸಿದವರಿಗೆಲ್ಲಾ ನೆನಪಿನ ಕಾಣಿಕೆ
Group Photo

ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ಹಾಗು ಸವಿಗನ್ನಡ ಪತ್ರಿಕಾ ಬಳಗದ ಸಂಪಾದಕರಾದ ನಾಗಣ್ಣ ಅವರ ಮನೆಯಲ್ಲಿ ಸಂಜೆ ಸ್ವಲ್ಪ ಕಾಲ ಚರ್ಚೆ ನಡೆಸಿದೆವು. ರೂಪಕ್ಕನವರಿಗೆ ಸನ್ಮಾನ ಮಾಡುವ ಮೂಲಕ ಅವರು ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ನಾಗಣ್ಣ ಅವರಿಗೆ ಸಂದ ಅಪಾರ ಪ್ರಶಸ್ತಿಗಳ ನೋಟ


ಅಂದಿನ ಸುಮಧುರ ಸಂಜೆ ನನ್ನ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು ಹೀಗೆ

ನಮ್ಮೆಲ್ಲರ ನೆಚ್ಚಿನ ಸೌಮ್ಯಕ್ಕ ಅವರ ಮೂರು ಮುದ್ದು ಪುಟಾಣಿಗಳು - ಈ ತ್ರಿವಳಿಗಳು ಕಾರ್ಯಕ್ರಮದಲ್ಲಿ ಎಲ್ಲರ ಮನ ಸೆಳೆದಿದ್ದರು

ಜಗತ್ಪ್ರಸಿದ್ಧ ಮೈಸೂರಿನ ಅರಮನೆ ಮುಸ್ಸಂಜೆಯ ಸಮಯದಲ್ಲಿ ಕಂಡಿದ್ದು ಹೀಗೆ
ಸಾರ್ಥಕವೆನಿಸಿದ ಮತ್ತೊಂದು ಕಾವ್ಯಸಂಚಾರ...

ಕವಿರಾಜ್ ರಾವ್, ಸತೀಶ್ ಬಿ ಕನ್ನಡಿಗ, ರೇವಣ್ ದೇಸಾಯಿ, ಜಗನ್, ಸಿಂಧು ಮತ್ತವರ ಸೋದರಿ, ಸೌಮ್ಯಕ್ಕ ಮತ್ತವರ

ಮೂರು ಮುದ್ದು ತ್ರಿವಳಿ ಮಕ್ಕಳು - ಶೃತಿ, ಶ್ವೇತ, ಸ್ನೇಹ, ಮೊದಲಾದವರನ್ನು ಮೊದಲ ಬಾರಿ ಕಂಡ ಸಂತಸ...

ಮನತುಂಬಿಸಿದ ಸವಿ ಸವಿ ನೆನಪುಗಳು...

ನಮ್ಮಲ್ಲಿ ಬಹಳಷ್ಟು ಜನಕ್ಕೆ ಚುಟುಕು ಬರೆಯಲು ಮಾಡಿದ ಚೊಚ್ಚಲ ಪ್ರಯತ್ನ ಯಶಸ್ಸು ಕಂಡ ಹುಮ್ಮಸ್ಸು..

ಹಿರಿಯ ಸಾಹಿತಿಗಳಿದ್ದ ವೇದಿಕೆ ಏರಿದ ಸಂತೋಷ...

ಕಾರ್ಯಕ್ರಮದ ನಂತರ ನಾವು ಒಟ್ಟಾಗಿ ಕಳೆದ ರಸಸಂಜೆ ಮತ್ತು ರುಚಿಕರ ಭೋಜನ..

ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ಮೇಲೆ ಕೈಯಲ್ಲಿ "ಡಾ. ಅಕಬರ ಅಲಿ ಸಮಗ್ರ ಕಾವ್ಯ", ರಂಗಣ್ಣನವರ "ಭಾವನಮನ", ನಾಗರಾಜ ರಾವ್‍ರವರ "ಮುಕ್ತಕ ಶಾರದೆ" ಮಹಾಬಲೇಶ್ವರವರ "ಸಂಜೆ ಮಲ್ಲಿಗೆ" ಪುಸ್ತಕಗಳು..

ಜೊತೆಗೆ ದಿನವಿಡೀ ಪಟ್ಟ ಪರಿಶ್ರಮದ ಫಲವಾಗಿ ಬರೋಬ್ಬರಿ 250 ಸುಂದರ ಸಂಗ್ರಹ ಯೋಗ್ಯ ಛಾಯಾಚಿತ್ರಗಳು!!

ನಿಜಕ್ಕೂ ಶತ ಪ್ರತಿ ಶತ ಸಾರ್ಥಕ ಈ ಸಂಚಾರ...!





Saturday, February 4, 2012

3K ಕಾವ್ಯಸಂಚಾರ - ಭಾಗ-1 - ಮಂಗಳೂರು, ಉಡುಪಿ

ಪ್ರೀತಿಯ ಬ್ಲಾಗ್ ಗೆಳೆಯರೇ,
ನಿಮಗೆಲ್ಲಾ ಅನಂತಾನಂತ ನಮನಗಳು. ನಿಮ್ಮೆಲ್ಲರಿಗೆ ಈ ಹಿಂದೆ ತಿಳಿಸಿದ್ದಂತೆ January 21st & 22nd ರಂದು ಮಂಗಳೂರಿನ ಸೂರತ್ಕಲ್ ಮತ್ತು ಉಡುಪಿಯಲ್ಲಿ ನಮ್ಮ ಕಾವ್ಯಸಂಚಾರದ ಕಾವ್ಯಸಂವಾದ ಕಾರ್ಯಕ್ರಮ ನಡೆಯಿತು. ಅದರ ಬಗ್ಗೆ ನಿಮ್ಮೆಲ್ಲರಿಗೂ ತಿಳಿಸಬೇಕೆಂದು ಒಂದು ಟಿಪ್ಪಣಿ ಬರೆಯೋಣ ಎಂದುಕೊಂಡೆ. ಆದರೆ ಸಮಯದ ಅಭಾವದಿಂದ ನನ್ನಿಂದ ಬರೆಯಲು ಸಾಧ್ಯವಾಗಲಿಲ್ಲ. ಆದರೆ ನಮ್ಮ ತಂಡದ ಸತೀಶ್ ಬಿ. ನಾಯಕ್ ಅವರು ತುಂಬಾ ಚೆನ್ನಾಗಿ ಬರೆದಿದ್ದಾರೆ ನಮ್ಮ ಕಾವ್ಯ ಪ್ರವಾಸದ ಬಗ್ಗೆ. ಆ ಎರಡು ದಿನಗಳ ಆಗುಹೋಗುಗಳನ್ನು ಕೇಳಿ ಅವರದೇ ಪದಗಳಲ್ಲಿ..

So over to our reporter Sathish B. Naik....

Camera man Pradeep ಜೊತೆ 3K Reporter Sathish B. Naik


ಬದುಕು ಯಾಂತ್ರಿಕ, ನಾಟಕೀಯ & ಅವಸರದ ಅವಘಡಗಳ ಜೊತೆ ಅರಿವಿರದೆ ಸಾಗುತ್ತಿರುವಾಗಲೇ ಕರಾವಳಿಯ ಮಡಿಲಿನಲ್ಲೆರಡು ಭವ್ಯ ದಿನಗಳನ್ನು ಕಡಲ ತಡಿಯಲಿ ಕಳೆದ ಮಾಂತ್ರಿಕ ಕ್ಷಣಗಳು, ಬದುಕು ಬರಡಾದರು ಮನದೊಳಗೆ ಯಾವತ್ತಿಗೂ ಹಸಿರೇ.. ಯೋಗ ಯೋಗ್ಯತೆ ಇಲ್ಲದೆ ರೋಗ ಕೂಡ ಬರೋದಿಲ್ಲ ಅನ್ನೋ ಮಾತು ಕೇಳಿದ್ದೆ. ನನ್ನದೇನು ಯೋಗವೋ..?? ನನ್ನದಂಥಾ ಯೋಗ್ಯತೆಯೂ..?? ನಾ ಕಲ್ಪನೆ ಮಾಡಿಕೊಂಡು ೧ ನಿರ್ಧಾರಕ್ಕೆ ಬರುವ ಮೊದಲೇ.. ಕರಾವಳಿಯ ತೀರದ ಕಾವ್ಯ ಸಂಚಾರ ಮುಗಿದು, ಮನಸ್ಸಿನ ಮನೆಯ ಯಾವುದೋ ಒಂದು ಮೂಲೆಯಲ್ಲಿ ಹಾಲುಕ್ಕಿದ ಸಂಭ್ರಮ.
ನನ್ನಂತೋರಿಗೆಲ್ಲ ಇದು ಬ್ರಹ್ಮಾಂಡನೀಯ ಕ್ಷಣಗಳೇ... ರದ್ದೀ ಕಾಗದವೊಂದು ಗಾಳಿಪಟವಾಗಿ ಆಗಸದಲ್ಲಿ ಹಾರಿದಂಥ ಸಾರ್ಥಕತೆ.. ಎಲ್ಲೋ ಬಿದ್ದಿದ್ದ ಬೀಜ ಇನ್ನೆಲ್ಲೋ ಹೂತು ಹೊಸ ಚಿಗುರ ಕಂಡು ಹೂವೊಂದ ಬಿಟ್ಟು ನಕ್ಕ ಸಂಭ್ರಮ.. ಬಾಡಿ ಮುದುಡಿ ಬಿದ್ದು ಹೋಗುವ ಹೂಗಳನ್ನೆಲ್ಲ ಬಿಡಿಸಿ ಆಯ್ದು, ಹಾರವ ಮಾಡಿ ದೇವರ ಮುಡಿಯಲ್ಲದಿದ್ದರೂ ಇನ್ನಾವುದೋ ಸಾರ್ಥಕತೆಗೆ ನಮ್ಮನು ಎಡೆಮಾಡಿಕೊಟ್ಟ ಆನಂದದ ಸಾಕ್ಷಾತ್ ಅನುಭವಗಳು ಕಾವ್ಯ ಸಂಚಾರದ ಎರಡು ದಿನ ಕಾಲದ ಕ್ಷಣ ಕ್ಷಣದಲ್ಲೂ, ಕಣ ಕಣದಲ್ಲೂ..
ಬೆಂಗಳೂರಿಂದ ಬಸ್ ಹತ್ತಿ, ಮತ್ತೆ ತಿರುಗಿ ಮಂಗಳೂರಿಂದ ಬಸ್ ಹತ್ತಿ ಬರುವಾಗಿನ ವರೆಗೆ ನಡೆದ ಘಟನೆಗಳೆಲ್ಲ ರೋಚಕ, ಸೋಜಿಗ & ಭವ್ಯ ಅನುಭವಗಳೇ. "ಕಾವ್ಯ ಸಂಚಾರ"ದ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಹೋಗಿದಿದ್ದಲ್ಲಿ ಕಾವ್ಯ ಸಂಚಾರ ವೆಂಬ ಪದದ ಮೂಲಾರ್ಥ ಕೂಡ ಎಂದಿಗೂ ಈ ಮನಸಿನ ಸ್ತಿಮಿತಕೆ ಸುಳಿದಿರದೆಂಬುದು ನಿಜ. ಬಸ್ ಇಳಿದು ಸುರತ್ಕಲ್ ನಲ್ಲಿ ಹೆಜ್ಜೆ ಇರಿಸಿದಾಗ ಮೊದಲನೆಯದಾಗಿ ಮಹೇಶ್ ಮೂರ್ತಿಗಳ ದರ್ಶನ & ಎರಡನೆಯ ದಾಗಿ ದಿ ಹಿಂದೂ ಪೇಪರ್ ನಲ್ಲಿನ ಮಂಗಳೂರು ಕಾವ್ಯ ಸಂಚಾರದ ಕುರಿತಾದ 3k ಯ ಕುರಿತಾದ ವರದಿ.ಮನಸ್ಸಿಗೆ ಹೇಗಾಗಿರಬೇಡ.. ಏನಾಗಿರಬೇಡ..??
ಪೇಪರ್ ಹಿಡಿದ ಕೈ ಇಂದಲೇ ಬಳಸಿ ಮಹೇಶ್ ಮೂರ್ತಿಗಳನೊಮ್ಮೆ ಅಪ್ಪಿದೆ.ದೇಹಕ್ಕೊಂದು ಮಧುರ ಅನುಭೂತಿ. ಆ ಅನುಭೂತಿ ಯನ್ನು ನೀಡಿದ ಕೀರ್ತಿಗೆ ಕಾರಣ, ಮಹೇಶ್ ಮೂರ್ತಿ ಯವರೊಂದಿಗಿನ ಅಪ್ಪುಗೆಯೋ ಅಥವಾ ಪೇಪರ್ ನಲ್ಲಿ ಬಂದ ವರದಿಯೋ.. ಈಗಲೂ ಕಗ್ಗಂಟು. ಅದಾದ ೧೦ ನಿಮಿಷದಲ್ಲಿ 3k ಯ ಉಳಿದ ಗೆಳೆಯ ಅಳಗದ ಆಗಮನ.. ರೂಪಕ್ಕ, ಅನು ಮೇಡಂ, ಅರುಣ್, ಪ್ರದೀಪ್, ಗೋಪಿನಾಥ್ ಸರ್ & ಮೇಘನ. ಭಾವ ಸಿಂಚನದ ಮೊದಲ ಅವತರಿಣಿಕೆಯ ಬಿಡುಗಡೆಯ ಸಂಧರ್ಭದಲ್ಲಿ ಕಂಡಿದ್ದ ದಿನದಿಂದ ಅಲ್ಲಿನ ವರೆಗೆ ಅವರುಗಳ ಅಸ್ಪಷ್ಟ ಚಿತ್ರಣ ಗಳಿಗೆ ಸ್ಪಷ್ಟ ಪೂರ್ಣ, ಭವ್ಯ ರೂಪ ಸಿಕ್ಕಿದ್ದು ಈ ಎರಡು ದಿನಗಳ ನಂತರ.
ಮುಂದೆ ನಡೆದದ್ದೆಲ್ಲ ಎಣಿಸಿಯೂ ಎಣಿಸದೆಯೂ ಶುಭಂ. ನಮಗೆಂದೇ ಕಾಯ್ದಿರಿಸಿದ್ದ ಹೋಟೆಲ್ಲಿನ ರೂಮಿನಲ್ಲಿ ನಾವು ತಯಾರಾಗಿ ಬಂದ ಬಳಿಕ ನಮ್ಮ ನೇರ ನಡೆ.. ಕಾಲ್ನಡಿಗೆಯಲ್ಲೇ.. ಹೋಟೆಲ್ ಸೂರಜ್ ಕಡೆಗೆ. ಬೆಳಗಿನ ತಿಂಡಿಗಾಗಿ. ನೀರ್ ದೋಸೆಯ ಮುಖವನ್ನ ಮೊದ ಮೊದಲು ನನಗೆ ಪರಿಚಯಿಸಿದ ಕೀರ್ತಿ ಆ ಹೋಟೆಲ್ ಗೆ.. ತಲಾ ಒಂದು ನೀರ್ ದೋಸೆ & ಒಂದೊಂದು ಬನ್ ಗಳ ಜೊತೆ ನಾವಾಡಿದ ತಿಂಡಿಯಾಟದ ನಂತರ ಅಶೋಕಣ್ಣ ನಮ್ಮನು ಬಂದು ಸೇರಿಕೊಂಡರು . ನಂತರ ನಡೆದದ್ದೆಲ್ಲ ಸಿನಿಮೀಯ ಕ್ಷಣಗಳು..
ಮಂಗಳೂರಿಗೆ ನಾವೆಲ್ಲಾ ಬಂದ ಮೂಲ ಉದ್ದೇಶ ಕಾವ್ಯ ಸಂಚಾರ. ಅದು ಪ್ರಾರಂಭ ಗೊಳ್ಳುವ ಮೊದಲೇ ನಮ್ಮೆಲರ ಪಾಲಿಗೊಂದು ಸುವಾರ್ತೆ.. ನಮ್ಮೆಲ್ಲರ ಸಂದರ್ಶನ ಸುವರ್ಣ (24X7 ನೇರ ದಿಟ್ಟ ನಿಂತರ) ಟೀವಿ ಗಾಗಿ. ಇದುವರೆವಿಗೂ ಅಂಥಾ ಕನಸು ಕೂಡಾ ಕಂಡಿರಲಿಲ್ಲ. ತಿಂಡಿ ತಿಂದ ಬಳಿಕ ಕಾವ್ಯ ಸಂಚಾರದ ಎರಡನೆಯ ಅವತರಣಿಕೆಯ ಅನಾವರಣ ಗೋಳ್ಳಬೇಕಿದ್ದ ಜಾಗ.. ಸುರತ್ಕಲ್ ನ ಗೋವಿಂದ ದಾಸ್ ಕಾಲೇಜ್ ಕಡೆ ಪಯಣ.. ನಿಶ್ಚಿತಾರ್ಥದ ಹೆಣ್ಣನ್ನು ನೋಡಲು ಬರುವ ಗಂಡಿನ ಮನೆಯವರಂತೆ.ಕಾಲೇಜಿನ ಆವರಣ ದೊಳಗೆ ಕಾಲಿಟ್ಟ ನಮಗೆ ಕಂಡದ್ದು ಪ್ರಶಾಂತ ಹಸಿರಿನ ನಡುವೆ ಸುಂದರ ಸುಸಜ್ಜಿತ ವ್ಯವಸ್ಥೆಯ ಕಾಲೇಜು. ಅಲ್ಲಿನ ಗ್ರಂಥಾಲಯ.. ಅದರ ಒಂದಿಂಚೂ ಬಿಡದೆ ಸುತ್ತಿ ಸುತ್ತಿ ನೋಡಿದೆವು.. ಗ್ರಂಥಾಲಯದ ಬಗ್ಗೆ ಹೇಳಲು ಅನು ಅಕ್ಕನೆ ಸರಿ. ಒಂದು ಅನುರೂಪ ಗ್ರಂಥಾಲಯ. ನಂತರ ಕಾರ್ಯಕ್ರಮ ನಡೆಯಲಿದ್ದ ವೇದಿಕೆಯ ಬಳಿ ಬಂದು ನಂತರ ಆಗಬೇಕಿದ್ದ ಆಗು ಹೋಗುಗಳ ಬಗ್ಗೆ ಚರ್ಚಿಸಿ ಹೊರಟದ್ದು ನೋಡಿ ಸುವರ್ಣ ಟೀವಿ ಯ ಕ್ಯಾಮೆರಾ ಕಣ್ಣಿನ ಕಡೆಗೆ. ಅಲ್ಲಿ ವರೆಗಿನ ಪಯಣವೂ ೧ ಸಿನಿಮೀಯ ಸಾಹಸವೇ. ಸಮಯ ನಿರ್ಧರಿಸಿಕೊಂಡು ಬಸ್ ಹತ್ತಿ ಹೋರಾಟ ನಮ್ಮ ಸುವರ್ಣ ಟೀವಿ ಸಂದರ್ಶನ ದ ಕನಸಿನ ಊಹಾ ಪೋಹಗಳ ಮಜಾ ಅನುಭವಿಸದಂತೆ ತಣ್ಣೀರು ಎರಚಿದ್ದು ಅನಿರೀಕ್ಷಿತ ಟ್ರಾಫಿಕ್ ಜಾಮ್. ಅದನ್ನು ದಾಟಿದ ನಂತರ ಎಲ್ಲವೂ ಸುರಾಗ.. ಎಲ್ಲವೂ ಸರಾಗ. ನಡು ನಡುವೆ ಗಂಗಾವತಿ ಅರುಣ್ ಬರಬೇಕಿದ ವಿಚಾರದಲ್ಲಿ ಕೊಂಚ ಗಲಿ ಬಿಲಿ.. ಅಂತೂ ಪೂರ್ಣ ನಿರ್ಭಂಧಿತ ವ್ಯವಸ್ಥೆ ಇಲ್ಲದೆಯೇ ಎಲ್ಲರೂ ಸುವರ್ಣ ಟೀವಿಯ ಕ್ಯಾಮೆರಾ ಮುಂದೆ ಹಲ್ಕಿರಿದು ಬಂದದ್ದಾಯ್ತು.. ಯಾರೂ ಕ್ಯಾಮೆರಾ ಮುಂದೆ ಏನು ಹೇಳಿದ್ದರೂ ಅದು ಅವರ ಮನದಾಳದ ಮುಕ್ತ ಮಾತುಗಳೆಂಬುದು ನಿಜ..
ನಮ್ಮ ನಂತರದ ಸಾಧನೆ ಮಹೇಶ್ ಮೂರ್ತಿಗಳ ಮನೆಯೂಟ. ಮನುಷ್ಯ ಮನಸ್ಪೂರ್ತಿ ಸಾಕು ಎನ್ನುವ ವಿಚಾರ ವೊಂದಿದ್ದರೆ ಅದು ಊಟವಂತೆ. ನಾವು ಸಾಕು ಸಾಕೆಂದರೂ ಬಿಡದೆ ಬೇಕು ಬೇಕೆಂದು ಬಡಿಸಿ ನಮ್ಮನ್ನು ಊಟ ಮಾಡಿಸಿದ ಮಹೇಶ್ ಮೂರ್ತಿಗಳ ಮನೆ, ಜನ, ಮನ, ಮನೆತನಗಳ ಪ್ರೀತಿ ಅಂಥಾದ್ದು. ಅವರ ಪ್ರೀತಿ ವಿಶ್ವಾಸಗಳಿಗೆ ಮುಕ್ಕಾಲು ಭಾಗ ತುಂಬಿ ಹೋಗಿದ್ದ ಹೊಟ್ಟೆಗೆ ಕೊಡಬಾರದ ಕಷ್ಟವನ್ನು ಕೊಟ್ಟು, ಇದ್ದ ಒಂದು ಹೊಟ್ಟೆಯ ಒಂದೂ ಮುಕ್ಕಾಲು ಭಾಗದಷ್ಟು ತುಂಬಿಸಿದ ಕೀರ್ತಿ, ಮಹೇಶ್ ಮೂರ್ತಿಗಳ ತಮ್ಮ ಪ್ರಸೀದ್ ರದ್ದು.. ಈಗೀಗ ಪಂಕ್ತಿ ಊಟವೆಂದರೆ ಪ್ರಸೀದ್ ನೆನಪಾಗುತ್ತಾರೆ.
ನಿಮ್ಮನ್ನು ನಮ್ಮನೆಗೆ ಕರೆದು.. ನಿಮಗೂ ಹಾಗೆ ಊಟ ಹಾಕಿಸಿ, ನಿಮಗೂ ಊಟದ ವಿಚಾರದಲ್ಲಿ ಕೊಡಬಾರದ ಕಷ್ಟವನ್ನು ಕೊಟ್ಟು ಸೇಡು ತೀರಿಸಿಕೊಳ್ಳುವ ವರೆಗೂ ನಿಮ್ಮನೆ ಊಟವನ್ನು ನಾನು ಅರಗಿಸಿ ಕೊಳ್ಳುವುದಿಲ್ಲ ಪ್ರಸೀದ್ ನೆನಪಿರಲಿ. ಇಂಥಾ ಒಂದು ಸಂಧರ್ಭವನ್ನು ಅರುಣ್ ಕೆಲವೊಂದು ಗಲಿಬಿಲಿಯಲ್ಲಿ ಮಿಸ್ ಮಾಡಿ ಕೊಂಡು ಬಿಟ್ರು.. ಬೇಜಾರಾಯ್ತು.
ಮಹೇಶ್ ಮೂರ್ತಿಗಳ ಮನೆಯೂ ಅಂಥಾದ್ದೆ.. ಮನೆಯಂಗಳವೇ ಮಿನಿ ಕ್ರಿಕೆಟ್ ಗ್ರೌಂಡ್.. ನಮಗೆ ಸ್ವಲ್ಪ ಸಾವಕಾಶ ವೆನಾದರು ಇದ್ದಿದ್ದರೆ ಅಲ್ಲೊಂದು ಮ್ಯಾಚ್ ಖಂಡಿತ ನಡೀತಿತ್ತು. ಅವರ ಮನೆ ಕಡೆಗೆ ಹೋಗುತ್ತಿರುವಾಗ ನನಗನ್ನಿಸಿದ್ದು ಕೇರಳದ ಯಾವುದೋ ಗಲ್ಲಿಗೆ ಕಾಲಿಟ್ಟ ಹಾಗೆ. ಸುತ್ತ ಹಸಿರು ಅಕ್ಕ ಪಕ್ಕ ಎರಡು ಮನೆ. ಮನೆಯ ಹಿಂಭಾಗಕ್ಕೆ ಒಂದು ಫಾರ್ಲಾಂಗ್ ನಡೆದರೆ ಸಾಗರ ತೀರ.. ಧ್ಯಾನದಿಂದ ಆಲಿಸಿದ್ದರೆ ಅಲೆಗಳ ಮೊರೆತ ಕೇಳಬಹುದು.. ಭಾಗ್ಯ ಅನ್ನೋದು ನಾವೆಲ್ಲಾ ಬಯಸಿದರೆ ಬರೋ ಅಂಥದಲ್ಲ ಬಿಡಿ.
ಮಹೇಶ್ ಮೂರ್ತಿಗಳ ಮನೆಯಿಂದ ಬಂದ ನಂತರ ಅರುಣ್ ನಮ್ಮನ್ನು ಸೇರಿ ಕೊಂಡರು. ಎಲ್ಲಾ ಪುನಹ ತಯಾರಾಗಿ.. ಗೋವಿಂದ ದಾಸ್ ಕಾಲೇಜ್ ಗೆ ಬಂದು ಆಗಲೇ ತಯಾರಾಗಿದ್ದ ವೇದಿಕೆಗೆ ತುರಾತುರಿಯಲಿ ತೂರಿಕೊಂಡು ಮಾಡಬೇಕಿದ್ದ ಮಾತಾಡಬೇಕಿದ್ದ ವಿಷಯಗಳ ಕಡೆ ತಲೆ ಕೊಟ್ಟೆವು. ಪೂರ್ತಿ ಕಾರ್ಯಕ್ರಮ ಒಂದು ಹಬ್ಬದೂಟ. ಆ ಕಾರ್ಯಕ್ರಮ ನಡೆದಷ್ಟು ಚಂದಗೆ ನಾನಿಲ್ಲಿ ಹೇಳಬಲ್ಲೇನಾ..?? ಗೊತ್ತಿಲ್ಲ. ಹೇಳಲು ಪುಟಗಳ ಸಂಖ್ಯೆ ಬೆರಳುಗಳ ಲೆಕ್ಖ ದಾಟಬಹುದು.. ಇರಲಿ ಊಹಿಸಿ ಅಷ್ಟೇ.. ಕಾರ್ಯಕ್ರಮ 3K ಯ ಒಂದು ಯಶಸ್ವಿ ಕಥನ.
ಭಾವಸಿಂಚನದ ಎರಡನೇ ಅವತರಣಿಕೆಯ ಕೊಡುಗೆ ನೀಡಿದ ಮಹಾಬಲ ಪೂಜಾರಿ ದಂಪತಿಗಳ ಸಮಕ್ಷಮದೊಂದಿಗೆ.. ಗೋವಿಂದ ದಾಸ್ ಕಾಲೇಜಿನ ಪ್ರಾಂಶುಪಾಲರು ಸೇರಿ ಹಲಾವಾರು ಗಣ್ಯರ ಹಿತ ನುಡಿ, ವಿಮರ್ಶೆ, ಚರ್ಚೆ & ಅಲ್ಲಿ ನೆರೆದಿದ್ದ ಹಲವು ಕವಿ ಮಹೋದಯ, ವೀಕ್ಷಕ & ವಿಧ್ಯಾರ್ಥಿ ಗಳನ್ನೊಳಗೊಂಡ ಕಾರ್ಯಕ್ರಮ ಸುಂದರ ಸುಂದರ ಸುಂದರ..
ಹಾಲುಂಡ ಮನಸ್ಸಿನೊಡನೆ ಕಾರ್ಯಕ್ರಮದ ಸವಿ ನೆನಪು & ಸವಿ ಮೆಲುಕುಗಳ ಜೊತೆ ನಮ್ಮ ಪಯಣ ಪನಂಬೂರ್ ಬೀಚ್ ಕಡೆ... kite festival ನೆಡೆ. ಬಾಲ್ಯದಲ್ಲಿ ಗಾಳಿಪಟ ಹಾರಿಸಿದ್ದು ಬಂಗಾರದ ನೆನಪು. ಕಡಲ ತಡಿಯಲಿ ಅಲೆಗಳ ಜೊತೆ ಸರಸವಾಡುತ್ತ, ಐಸ್ ಕ್ರೀಂ ಸವಿಯುತ್ತ.. ಗಾಳಿಪಟ ಹಾರಿಸುತ್ತ.. ಕಂಡ ಕಂಡ ಕಂಡದ್ದಕ್ಕೆಲ್ಲ ಕಟ್ಟು ಕತೆಗಳ ಕಟ್ಟುತ್ತಾ..ಮಸಾಲ ಭರಿತ ಚುರುಮುರಿ, ಕಡಲೇ ಕಾಯಿಗಳನ್ನು ಮೆಲ್ಲುತ್ತಾ..ಒಂದು ಗಂಟೆಗಳ ಕಾಲದ ವರೆಗೆ ಬಾಲ್ಯವನ್ನು ಮತ್ತೊಮ್ಮೆ ತಂದುಕೊಂಡು ಆನಂದಿಸಿದೆವು.

A Kite designed as Lord Ganesh's face... International Kite Festival, Panambur beach, Mangalore
ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂಥ ಕ್ರೀಡೆಯೊಂದನ್ನು ಪ್ರತ್ಯಕ್ಷ ನೋಡುತ್ತಿದ್ದೆ! ಅದು ಜೋಡು ಕೆರೆ ಕಂಬಳ! ವಾಹ್! ಎಂಥ ದೃಶ್ಯ ಅದು!
ನಾವು ಕಂಬಳ ನೋಡುತ್ತಿದ್ದಾಗ ಒಂದು ಹಾಸ್ಯ ಘಟನೆ ಸಂಭವಿಸಿತು.. ಜೋಡೆತ್ತುಗಳನ್ನು ಓಡಿಸುವವನು ಕೆಸರಿನಲ್ಲಿ ಕಾಲು ಜಾರಿ ಅಲ್ಲೆ ಬಿದ್ದ... ಆದರೆ ಅವನ್ ಕೋಣಗಳು ಮಾತ್ರ ಓಡುವುದು ನಿಲ್ಲಿಸಲಿಲ್ಲ. ಕೊನೆಗೆ ಈ ಯಜಮಾನನಿಲ್ಲದೆ ಕೋಣಗಳು ತಾವಾಗಿಯೇ ಓಡಿ ಸ್ಪರ್ಧೆಯಲ್ಲಿ ಮೊದಲು ಬಂದವು!! ಅಗ ನಾವೆಲ್ಲರೂ ಎದ್ದು ನಿಂತು ಸೀಟಿ ಹೊಡೆಯುವ ಮೂಲಕ ಕೋಣಗಳಿಗೆ ಪ್ರೋತ್ಸಾಹಿಸಿದೆವು!

ಒಟ್ಟಿನಲ್ಲಿ ಜನರ ನಡುವಿನಿಂದ ಬೆಂಕಿ ಉಗುಳುತ್ತಾ ವೇದಿಕೆ ಮೇಲೆ ಆಗಮಿಸಿದ ಮಹಿಷಾಸುರನ Entry ಭರ್ಜರಿಯಾಗಿತ್ತು.. ಹೆದರಿದ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು.. ನಾವು ಸಹ!!


ಅಬ್ಬಬ್ಬಾ! ಎಂಥಾ ಭಯಂಕರ ಕಣ್ಣುಗಳು! ನಿಜವಾದ ರಾಕ್ಷಸನೇ ಬಂದುಬಿಟ್ಟನೇ ಎಂಬ ಭ್ರಮೆಹುಟ್ಟಿಸುತ್ತಿತ್ತು!

ನಂತರ ಮತ್ತದೇ ಸೂರಜ್ ಹೋಟೆಲಿ ನಲ್ಲಿ ಊಟ ಮುಗಿಸಿ, ಎಲ್ಲರ ಪಯಣ ಮೂಡ ಬಿದರಿಯ ಕಡೆಗೆ.. ಜೋಡು ಕರೆ ಕಂಬಳ, & ಯಕ್ಷಗಾನಗಳ ಮೊದಲ ಬಾರಿ ಕಣ್ಣಾರೆ ಕಂಡ ಧನ್ಯತೆ. ನಿಜಕ್ಕೂ ಅದೊಂದು ರೋಮಾಂಚಕ.. & ಅದ್ಭುತ ಕ್ರೀಡೆ.. we all loved .. ಕಂಬಳ ನೋಡುವ ತುಡಿತದೊಂದಿಗೆ ಆರಂಭಿಸಿದ ಪಯಣದಿಂದ ಹಿಡಿದು ಕಂಬಳ ಮುಗಿಸಿಕೊಂಡು ಸುರತ್ಕಲ್ ನಲ್ಲಿ ನಡೆಯುತ್ತಿದ್ದ ಭೂತಕೋಲ ವನ್ನು ನೋಡುವ ವರೆಗಿನ ಪಯಣದಲ್ಲಿ.. ಕಾರಿನಲ್ಲಿದ್ದ ನಮ್ಮಷ್ಟೂ ಜನರ ಬಾಯಿಂದ ಅದೆಷ್ಟು ಹಾಡುಗಳು ಅಂತ್ಯಾಕ್ಷರಿ ಹೆಸರಿನಲ್ಲಿ ನಲುಗಿ, ನಡುಗಿ ಹೋದವೋ ಗೊತ್ತಿಲ್ಲ.. ಆದ್ರೆ ಒಂದು ನಿಜವೆಂದರೆ.. ಅಲ್ಲಿ ಯಾರೊಬ್ಬರದು ಸೋಲದ ಮನಸು.. & ಎಲ್ಲರದು ಸುಶ್ರಾವ್ಯ ಕಂಠ. ಜೊತೆಗೆ ಕವಿ ಹೃದಯದ ಯಕ್ಷಗಾನದ ಕೇಕೆ ಅದ್ಭುತ.
ಭೂತಕೋಲಾಟದಲ್ಲಿ ತನ್ಮಯನಾಗಿ ಕುಣಿಯುತ್ತಿರುವ ಪಾತ್ರಧಾರಿ

ಒಂಧರ್ಧ ಗಂಟೆ ದೇವರೇ ಎದ್ದು ಬಂದು ಕುಣಿಯುತ್ತಿರುವನೆ ಎಂಬಂತೆ ಭಾಸವಾಗುತ್ತಿದ್ದ ಭೂತ ಕೋಲವನ್ನು ಕಂಡು ನಂತರ ನಾವು ಸಾಗಿದ್ದು ಮಹಿಷಾಸುರನ ನಾಟಕದೆಡೆಗೆ.. ಮಧ್ಯ ರಾತ್ರಿಯಾದರೂ ನಾವಾರು ಮರುಗದೆ.. ಕೊರಗದೆ ಕಂಡ ನಾಟಕವದು. ಮಹಿಷಾಸುರನ ಆಗಮನದ ಅದ್ಧೂರಿತನ ವನ್ನು ಕಣ್ಣಾರೆ ಕಂಡ ನಾಟಕ. ಅಂತೂ ಒಲ್ಲದ ಮನಸ್ಸಿಂದ ಮಿತಿ ಮೀರಿದ ಸಮಯಕ್ಕಂಜಿ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿ ಅರ್ಧ ರಾತ್ರಿಗೆ ಹೋಟೆಲ್ಲಿನ ಕಡೆಗೆ ಮರಳಿದೆವು. ನಾವು ೫ ಜನ ಹುಡುಗರೂ ಎರಡು ಹಾಸಿಗಯ ಮೇಲೆ ಒಟ್ಟಿಗೇ ಮಲಗಿದ್ದು ಹಳೆಯ ಹಾಸ್ಟೆಲ್ ಒಂದರ ನೆನಪನ್ನು ಮರಳಿಸಿ ಹೋಗಿತ್ತು.
ಹೆಚ್ಚೆಂದರೆ ನಾಲ್ಕು ಗಂಟೆ ನಿದ್ರಿಸಿರಬಹುದಷ್ಟೇ.. ಮತ್ತೆ ಮುಂಜಾನೆ ಧೂರ್ತರಂತೆ ಬಂದ ಮಹೇಶ್ ಮೂರ್ತಿಗಳ ಒತ್ತಾಯಕ್ಕೆ ಮಣಿದು ಬೆಳ್ಳಂಬೆಳಿಗ್ಗೆ ಎದ್ದು ಶುಚಿಯಾಗಿ ಮತ್ತೆ ಮಂಗಳೂರಿಗೆ ಹೊರಟ್ವು. ಕಲ್ಲಚ್ಚು ಬಳಗದ ಜೊತೆ ಆತ್ಮೀಯ ಸಂವಾದ ಅಚ್ಚು ಮೆಚ್ಚಾಯಿತು. ನಂತರ ನಾವು ಸಾಗಿದ್ದು ವಿಶೇಷ ಮಕ್ಕಳ ವಿಶೇಷ ಕೂಟ ದೆಡೆಗೆ. ಮಂಗಳೂರು ಸೀಮಿತದ ವಿಕಲಾಂಗ ಮಕ್ಕಳ ಬೃಹತ್ ಸಮ್ಮೆಳನವದು. ನೋಡಿದವರ ಕಣ್ಣು, ಮನಸು, ಕರುಳು ಎಲ್ಲ ತುಂಬಿ ಬರುವಂತಿತ್ತು.. ಅಲ್ಲಿನ ಕ್ಷಣಗಳು. ಅಲ್ಲಿ ಕೂಡ ಬಂದಿದ್ದ ಒಂದೆರಡು ಮಾಧ್ಯಮಗಳ ಜೊತೆ ಹರಟಿ, ವಿಶೇಷ ಕೂಟದ ವಿಶೇಷ ಸವಿ & ತಿನಿಸು ಗಳನ್ನೂ ಸವಿಯುತ್ತ ಮೆಲುಕುತ್ತ .. ಅಲ್ಲಿಯೇ ಮಧ್ಯಾನದ ಊಟ ಮುಗಿಸಿ ನೇರ ಉಡುಪಿಯೆಡೆಗೆ ಪಯಣ.

 
ಮಂಗಳೂರಿನ ರಸ್ತೆಯಲ್ಲಿ ಪಯಣಿಸುವಾಗ ನಮ್ಮ ತಂಡ "ಕರುನಾಡ ತಾಯಿ ಸದಾ ಚಿನ್ಮಯಿ.." ಹಾಡುತ್ತಿದ್ದರೆ ಮನದಾಳದಲ್ಲಿ ಎಲ್ಲೋ ಒಂದು ಕಡೆ ಕನ್ನಡದ ಕಂದಮ್ಮಗಳಾಗಿ ಹುಟ್ಟಿದ್ದಕ್ಕೂ ನಮ್ಮ ಜನ್ಮ ಸಾರ್ಥಕವಾಯಿತು ಎಂಬ ಭಾವ ಉಕ್ಕಿ ಬರುತ್ತಿತ್ತು!
ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್ ನಾಯಕ್ ಅವರೊಂದಿಗೆ 3K ತಂಡ ಸಂವಾದ ನಡೆಸಿತು.

ಮಂಗಳೂರಿನ ಖ್ಯಾತ ಸಾಹಿತಿ ಕು.ಗೋಪಾಲ ಭಟ್ ಅವರನ್ನು ಸನ್ಮಾನಿಸುತ್ತಿರುವ 3K ತಂಡ...

ಕು.ಗೋ.ರವರು ಹಿರಿಯ ಸಾಹಿತಿಗಳಾದರೂ ಮಗುವಿನಂಥ ಮನಸು, ಬಹಳ ಸಾದಾ ಸೀದ ನಡುವಳಿಕೆ.. ನಾವು ಉಡುಪಿಯಲ್ಲಿದ್ದಾಗ ಅವರು ನಮ್ಮೆಲ್ಲರಿಗೂ ತಮ್ಮದೇ ಹಾಗು ಕೆಲವು ಇತರರ ಪುಸ್ತಕಗಳನ್ನು ಉಚಿತವಾಗಿ ಹಂಚುತ್ತಿದ್ದರು. ನಾನು ಅವರನ್ನು ಕೇಳಿದೆ... "ಸಾರ್.. ನಮ್ಮ ಭಾವಸಿಂಚನ ಪುಸ್ತಕವನ್ನು ಎಲ್ಲರಿಗೂ ಉಚಿತವಾಗಿ ಕೊಡಬಾರದಿತ್ತು. ಅದಕ್ಕೆ ಒಂದು ಬೆಲೆಯನ್ನು ನಿಗದಿಪಡಿಸಬೇಕಿತ್ತು ಎಂದು ನಿಮ್ಮ ಭಾಷಣದಲ್ಲಿ ಹೇಳಿದಿರಿ. ಆದರೆ ನೀವೆ ನಿಮ್ಮ ಪುಸ್ತಕಗಳನ್ನು ನಮಗೆಲ್ಲ ಉಚಿತವಾಗಿ ನೀಡುತ್ತಿರುವುದು ಸರಿಯೆ?" ಅದಕ್ಕವರು "ನೀವು ನಿಮ್ಮ ಪುಸ್ತಕವನ್ನು ಎಲ್ಲರಿಗೂ ಉಚಿತವಾಗಿ ನೀಡಿದಿರಿ. ಅದಕ್ಕೆ ಬೇಡ ಎಂದೆ. ಇದು ನಾನು 3K ತಂಡಕ್ಕಷ್ಟೇ ಪ್ರೀತಿಯಿಂದ ಕೊಡುತ್ತಿರುವ ಉಡುಗೊರೆ. ಉಡುಗೊರೆಗೆ ಬೆಲೆ ಕಟ್ಟಲು ಸಾಧ್ಯವೇ?" ಎಂದು ತಮ್ಮ ಮುಗ್ಧ ನಗು ಬೀರುತ್ತಾ ಹೇಳಿದರು! ಅವರನ್ನು ನಾವು ಭೇಟಿಯಾಗುತ್ತಿದ್ದುದು ಅದೇ ಮೊದಲ ಬಾರಿ. ಆದರೂ ಅಷ್ಟು ಅಕ್ಕರೆಯಿಂದ ನಮ್ಮನ್ನು ಕಂಡ ಅವರ ವಿಶಾಲ ಮನಸ್ಸಿಗೆ ನೂರೊಂದು ನಮನಗಳು  
ಉಡುಪಿಯ ಕಿದಿಯೂರು ಹೋಟೆಲಿನಲ್ಲಿ ಸುಹಾಸಂ ಹಾಸ್ಯ ಪ್ರಿಯ & ಚುಟುಕು ಲೇಖಕರ ವತಿಯಿಂದ ಹಮ್ಮಿಕೊಳ್ಳಲಾದ ಸಂಜೆಯ ಸುಂದರ ಕಾರ್ಯಕ್ರಮ. ಅಲ್ಲಿನ ಹಿರಿಯ ಸಾಹಿತಿಗಳ ಸಮಕ್ಷಮದಲ್ಲಿ ಭಾವ ಸಿಂಚನದ ಬಗೆಗೆಗಿನ ಭಾವ ವರ್ಷ ನಮ್ಮದೆಯೊಳಗೆ ನೂರಾರು ಬಣ್ಣ ಬಣ್ಣದ ಭಾವನೆಗೆಳ ಹರ್ಷ. ಅನೇಕ ಹಿರಿಯ ಕಿರಿಯ ಸಾಹಿತಿಗಳ ಉಪಸ್ತಿತಿಯಲ್ಲಿ ಕಡಲ ಕಿನಾರೆಯ ಸಂಜೆಯ ಮಧುರ ಕಾರ್ಯಕ್ರಮದಲ್ಲಿ ನೆರೆದಿದ್ದ ಅನೇಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಗಳಿಸಿದವರ ನಡುವಲ್ಲಿ ಅಂದಿನ ಸಂಜೆಗೆ 3k ಬಳಗ ಧನ್ಯ. ಕು ಗೋ ರಂಥ ಮಹಾನ್ ಕವಿ & ಹಿತೈಷಿ ಗಳ ಪರಿಚಯ & ಸುಹಾಂ ನಂಥ ಒಂದು ಸಕ್ರಿಯ ಒಕ್ಕೂಟ ದೆಡೆಗಿನ ನಮ್ಮ ಬಳಗದ ನಂಟು ವರದಾನವೇ ಸರಿ.
ಸುಹಾಸಂ ಕಾರ್ಯಕ್ರಮದ ಬಳಿಕ ಮತ್ತೆ ನಮ್ಮದು ಅವಸರದ ಓಟ ದೌಡು..9 .30 ಗೆ ಕಾಯ್ದಿರಿಸಿದ್ದ ಬಸ್ಸು ಹಿಡಿಯಲು ಹರಸಾಹಸ. ದಡ ದಡನೆ ನಮ್ಮ ಲಗೇಜ್ ನೆಲ್ಲ ಪ್ಯಾಕ್ ಮಾಡಿ, ಅಂಜುತ್ತಲೇ ಊಟ ಮಾಡಿ, ಅಳುಕುತ್ತಲೇ ನೀರು ಕುಡಿದು, ಆತುರಾತುರದಲ್ಲಿ ಬಸ್ಸನೆರಿದ ಕ್ಷಣಗಳೆಲ್ಲ ಇಂದು ತುಟಿಯಂಚಲಿ ಸಣ್ಣ ನಗೆಯಾಗಿ ಆಗಾಗ ಪ್ರತಿ ಫಲಿಸುತ್ತಿರುತ್ತವೆ. ಕಾವ್ಯ ಸಂಚಾರದ ಮೊದಲ ಹೆಜ್ಜೆ ಅಮೋಘ ಯಶಸ್ಸಿನೊಂದಿಗೆ ಮುಕ್ತಾಯವಾದುದು ಮಾತ್ರವಲ್ಲ.. ನಮ್ಮ ಮುಂದಿನ ಹೆಜ್ಜೆಗಳ ಮೇಲೆ ಭಾರಿ ಭರವಸೆ ಗಳನಿತ್ತು, ದೊಡ್ಡ ಜವಾಬ್ದಾರಿ ಗಳನ್ನೂ ವಹಿಸಿ ಕಳಿಸಿದ್ದು ಸುಳ್ಳಲ್ಲ. ಇದೆ ಯಶಸ್ಸನ್ನು ಮುಂದುವರೆಸಿಕೊಂಡು ಸಾಗುತ್ತ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಳಿಲು ಸೇವೆ ನೀಡುವ 3k ಯ ಪ್ರತಿ ಹೆಜ್ಜೆಯೂ ಇತಿಹಾಸ ವಾಗಲೆಂಬ ಆಶಯದೊಂದಿಗೆ..
ಕಾಡುವ ಕೆಲ ನೆನಪುಗಳು..
<>
 
<>


 
-ಮಹೇಶ್ ಮೂರ್ತಿಗಳ ಸಾಗರದಂಥ ಮಾತು, ಕಾರ್ಯದಕ್ಷತೆ & ಶೈಲಿ.

 
-ರೂಪಕ್ಕನ ಸಾರ್ವಕಾಲಿಕ ಸಹಮತ & ಸೌಮ್ಯತನದ ಸಾರಥ್ಯ..
- ಅನು ಅಕ್ಕನ ಅದ್ಭುತ & ಅನನ್ಯ ಮಾತುಗಳು..
- ಕವಿ ಹೃದಯದ ನಿರೂಪಣೆ & ಹಾಸ್ಯ ಮನಸ್ಸು.
- ಗೋಪಿನಾಥರ ಹಾಡು & ಒಡನಾಟ
- ಪ್ರದೀಪರ ಫೋಟೋಗ್ರಫಿ & ಕವಿಯಾಗಿಸಿದ ಅವರ ದ್ವೇಷದ ಕಥೆ.
- ಅರುಣ್ ನವಲಿಯವರ ವ್ಯಕ್ತಿತ್ವ .
- ಅಶೋಕಣ್ಣನ ಕನ್ನಡ, ಸೌಹಾರ್ಧತೆ & ಸರಳತೆಯ ನಂಟು.
<>




- ಮೆಘನಳ ನಗು & ಚಿತ್ರ..
- ನೂತನ್ ರ ಸಹಭಾಗಿತ್ವ.
- ಮೋನಿಕಾ ರ ಸಾಥ್..
- ಅನೇಕ ಹಿರಿಯ & ಕಿರಿಯ ಕವಿ ಮನಗಳ ನುಡಿಮುತ್ತುಗಳು.
- 3k ಯ ಈ ಯಶಸ್ಸನ್ನು ಹಂಚಿಕೊಳ್ಳಲೇ ಬೇಕಿದ್ದ, ಈ ಕಾರ್ಯಕ್ರಮಕ್ಕೆ ಬರಲಾಗದೆ ಹೋದ ಗೆಳೆ ಮನಸ್ಸುಗಳೆಡೆಗಿನ ಮರುಕ.
ಧನ್ಯವಾದಗಳು


- ಸತೀಶ್ ನಾಯ್ಕ್
ಭದ್ರಾವತಿ.