Tuesday, July 13, 2010

ನಿತ್ಯಾನಂದ ಆಶ್ರಮ ಭೇಟಿ!!



ಗೆಳೆಯರೇ,


ನಿನ್ನೆ ನಾನು ಬಿಡದಿಯಲ್ಲಿರುವ ನಿತ್ಯಾನಂದನ ಆಶ್ರಮಕ್ಕೆ ಭೇಟಿ ನೀಡಿದೆ. ನಾನು ಅಲ್ಲಿಗೆ ಹೋದ ವಿಷಯ ಕೇಳಿ ನನ್ನ ಎಲ್ಲಾ ಸ್ನೇಹಿತರು ಅಚ್ಚರಿಗೊಂಡಂತೆ ನೀವು ಆಶ್ಚರ್ಯ ಪಡುವಿರಿ ಎಂದು ಭಾವಿಸಿರುವೆ. ನನ್ನ ಸ್ನೇಹಿತರಂತೂ ಕೆಲವರು "ಅಲ್ಲಿಗೆ ಯಾವ ಹೊಸ ಕಲೆ ಕಲಿಯೋಕೆ ಹೋಗಿದ್ದೆಯಪ್ಪ ಕಲಾವಿದ?" ಎಂದು ವಿಚಿತ್ರವಾಗಿ ಕೇಳಿ ಹಾಸ್ಯ ಮಾಡಿದರು. ನಿಜ ಇಷ್ಟೆ.. ನಾನು ಕೇವಲ ಕುತೂಹಲ ತಣಿಸಲು ಅಲ್ಲಿಗೆ ಹೋಗಿದ್ದೆ.


ನಾನು ನಿತ್ಯಾನಂದನ ಅಪ್ಪಟ ವಿರೋಧಿ ಎಂಬುದು ನಿಜ. TV9ನಲ್ಲಿ ಆತನ ರಾಸಲೀಲೆಯ ದೃಶ್ಯಗಳು ಪ್ರಸಾರವಾದಾಗಿನಿಂದ ನನಗೆ ಆತನ ಮೇಲೆ ಎಲ್ಲಿಲ್ಲದ ಸಿಟ್ಟು. ನಮ್ಮ ಭಾರತೀಯ ಸಂಸ್ಕೃತಿ ಬಗ್ಗೆ ಜನ ಇಟ್ಟಿರುವ ಅಪಾರ ಭಕ್ತಿ ಅಭಿಮಾನಗಳನ್ನು ದುರುಪಯೋಗ ಪಡಿಸಿಕೊಂಡು ಅದಕ್ಕೆ ಮಸಿ ಬಳಿಯುವ ಇಂತಹ ಕಳ್ಳ ಸನ್ಯಾಸಿಯರನ್ನು ದ್ವೇಷಿಸುತ್ತಾ ಬಂದಿರುವೆ. ಈ ಹಿಂದೆ ಆತನ ವಿರೋಧವಾಗಿ ಇದೇ blogನಲ್ಲಿ ಒಂದೆರಡು post ಮಾಡಿದ್ದೆ. ಇವತ್ತು ಸೋಮವಾರದ ದಿನ ರಜ ಇತ್ತು. ಸ್ನೇಹಿತರೆಲ್ಲರೂ ಕೆಲಸಕ್ಕೆ ಹೊರಟರು. ಆದ್ದರಿಂದ ಒಬ್ಬನೇ ಎಲ್ಲಾದರೂ ಸುತ್ತಾಡಿ ಬರೋಣ ಎಂದು ಯೋಚಿಸಿ, ರಾಮನಗರದ ಶ್ರೀ ರಾಮ ಬೆಟ್ಟಕ್ಕೆ ಹೋಗಿ ಬರೋಣವೆಂದು ತೀರ್ಮಾನಿಸಿ ನನ್ನ ಪುಟ್ಟ ಕೈನಿ ಹತ್ತಿ ಹೊರಟೆ.



------@ The King of the Road - My Kinetic!! @------
ಏನಂದ್ರಿ?.. ಕೈನಿ ಅಂದ್ರೆ ಏನು ಅಂದ್ರ? ಅದು ನನ್ನ Kinetic Honda nick name! ಗೆಳೆಯರು ನನ್ನ ಗಾಡೀನ ಪ್ರೀತಿಯಿಂದ "White Beauty" ಎಂದು ಕರೆಯುತ್ತಾರೆ. ಅದು ಗಾಡಿ White & Beautiful ಆಗಿದೆ ಅಂತನೋ ಅಥವಾ ಹಿಂದೆ ಒಂದು ಜ಼ಮಾನದಲ್ಲಿ ಅದು ಬಹಳ Whiteಆಗಿರೊ Beautyಗಳ ಹಿಂದೆ ಏನೋ ಸಾಧಿಸಲು ಸುತ್ತಾಡಿದೆ ಅಂತನೋ ಗೊತ್ತಿಲ್ಲ..
ಅಂತೂ ಕಾಲೇಜಿನ ದಿನಗಳಿಂದಾನೆ ಅದಕ್ಕೆ ಆ ಹೆಸರು ಇರುವುದು ನೆನಪು!!




----@ ಶ್ರೀರಾಮ ಬೆಟ್ಟಕ್ಕೆ ನನ್ನ ಸವಾರಿ ಹೊರಟಿದ್ದು ಹೀಗೆ @-----

ನಾನಿರುವ ಜಾಗಕ್ಕೂ, ಹೋಗಬೇಕಾದ ಜಾಗಕ್ಕೂ ಬಹಳ ದೂರವೆನಿಸಿದರೂ, ರಾಜಾಜಿನಗರದ ನಳಪಾಕ ಹೋಟೆಲಿನಲ್ಲಿ ಒಂದು ದಾವಣಗೆರೆ ಬೆಣ್ಣೆ ದೋಸೆ ತಿನ್ನಲೇಬೇಕೆನಿಸಿತು. ಹಠ ಸಾಧಿಸಿಯೇ ಬಿಟ್ಟೆ! (ಜೀವನದಲ್ಲಿ ಇಂತಹ ಹಠಗಳನ್ನು ಯಾವತ್ತೂ miss ಮಾಡಿಕೊಂದಿಲ್ಲ ನಾನು!) ಅಲ್ಲಿಗೆ ಹೋದ ಮೇಲೆ ಹಸಿವು ಹೆಚ್ಚಾಗಿ ಬೆಣ್ಣೆ ದೋಸೆ ಜೊತೆ ಮಸಾಲ ಪಡ್ಡುನೂ ಗುಳುಂ ಸ್ವಾಹ!!



--------------@ ನಿತ್ಯಾನಂದನ ಸುಟ್ಟ ಚಿತ್ರಪಟ @---------------


ಮತ್ತೆ ಮೈಸೂರು ರಸ್ತೆ ಕಡೆಗೆ ಪ್ರಯಾಣ ಬೆಳೆಸಿದೆ. ಶ್ರೀ ರಾಮ ಬೆಟ್ಟಕ್ಕೆ ಹೊರಟವನು ಬಿಡದಿ ಕಳೆದ ನಂತರ ರಸ್ತೆಯ ಬಲಬದಿಗೆ ಕಂಡ ನಿತ್ಯಾನಂದನ ದೊಡ್ಡ ಚಿತ್ರ ಕಂಡು ಗಾಡಿ ನಿಲ್ಲಿಸಿದೆ. ಆ ದೊಡ್ಡ ಚಿತ್ರಪಟ ಇತ್ತೀಚೆಗೆ ನಡೆದ ಗಲಭೆಗಳಲ್ಲಿ ಬೆಂಕಿಗಾಹುತಿಯಾಗಿ ತುದಿಯಲ್ಲಿ ಸ್ವಲ್ಪ ಸುಟ್ಟಿತ್ತು. ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಕೆಲಸಗಳನ್ನು ಮಾಡಿ ಸಿಕ್ಕಿ ಬಿದ್ದರೂ ಸದಾ ಹಸನ್ಮುಖಿಯಾಗಿರುವ ನಿತ್ಯಾನಂದನ ಪ್ರತೀಕವೆಂಬಂತೆ ಸುಟ್ಟ ಪಟದಲ್ಲಿ ಅವನ ಮುಗುಳ್ನಗೆ ಚಿತ್ರ ರಾರಾಜಿಸುತ್ತಿತ್ತು. ಈ ಭಂಡನ ಆಶ್ರಮವನ್ನು ಒಂದು ಬಾರಿಯಾದರೂ, ಹೊರಗಿಂದಾದರು ನೋಡಿಬರಬೇಕೆಂದೆನಿಸಿ ಗಾಡಿ ತಿರುಗಿಸಿದೆ. ಅರ್ಧ ದಾರಿಯಲ್ಲಿ ನಡೆದು ಹೋಗುತಿದ್ದ ಒಬ್ಬರನ್ನು "ಇಲ್ಲಿ ನಿತ್ಯಾನಂದ ಆಶ್ರಮಕ್ಕೆ ಯಾವ ಕಡೆ?" ಎಂದು ಕೇಳಿದೆ. ಅವರು ಅಷ್ಟಕ್ಕೆ ವಿಚಿತ್ರವಾಗಿ ನೋಡಿ, ನಾಚಿ, ತಲೆ ಬಗ್ಗಿಸಿ "ಗೊತ್ತಿಲ್ಲ" ಎಂದು ನುಡಿದು ಜೋರು ನಗು ತಡೆದುಕೊಂಡವರಂತೆ ಹೊರಟು ಹೋದರು! ಸ್ವಲ್ಪ ದೂರ ಹೋದ ನಂತರ ಮತ್ತೊಬ್ಬರು ಸಿಕ್ಕಿದರು. ಅವರನ್ನು ಕೇಳಿದೆ. ಅವರು ತಾವೂ ಅಲ್ಲಿಗೆ ಹೋಗುತ್ತಿರುವುದಾಗಿ ಹೇಳಿ drop ಕೇಳಿದರು. ಜೊತೆಗೆ ಹೊರಟೆವು. ಮಾರ್ಗ ಮಧ್ಯೆ ಮಾತು ಶುರುವಾಯಿತು. ಅವರ ಹೆಸರು ರಾಜು ಅಂತ ಇಟ್ಟುಕೊಳ್ಳೋಣ(ಹೆಸರು ಬದಲಾಯಿಸಿದೆ).


ಅವರು: "ನೀವು ನಿತ್ಯಾನಂದ ಸ್ವಾಮಿಗಳನ್ನು ನೋಡಲು ಬಂದವರೆ?"
ನಾನು: "ಹಾಗೇನು ಇಲ್ಲ.. ಸುಮ್ನೆ ಆಶ್ರಮ ನೋಡಿ ಹೋಗೋಣ ಅಂತ ಬಂದೆ.. ನೀವು ಸ್ವಾಮಿಯನ್ನು ನೋಡಲು ಬಂದವರೇ?"
ಅವರು "ಇಲ್ಲ ನಾನು ಆಶ್ರಮದಲ್ಲೆ ಕೆಲಸ ಮಾಡುವವನು.. ನೀವು ಹೊಸಬರು ಆಶ್ರಮದ ಒಳಗಡೆ ಹೋಗಲು ಬಿಡುವುದಿಲ್ಲ. ನಾನು ನಮ್ಮವರು ಎಂದು
ಹೇಳಿ ಒಳಗೆ ಕರೆದುಕೊಂಡು ಹೋಗ್ತೀನಿ ಬನ್ನಿ.."




---------@ ಆಶ್ರಮದಲ್ಲಿ ಹೆಜ್ಜೆ ಹೆಜ್ಜೆಗೂ checkpost@---------


ಆಶ್ಚರ್ಯ! ಒಳಗೆ ಹೋಗೊದೊ? ಬೇಡ್ವೊ? ಅನ್ನಿಸ್ತು.. ಆದ್ರೂ ಸುಮ್ಮನಿದ್ದೆ. ಆಶ್ರಮದ ಪಕ್ಕದಲ್ಲೆ ಮುತ್ತಪ್ಪ ರೈ ಎಸ್ಟೇಟ್, ಬಂಗಲೆ, ಮುಂದೆ ಹೋದಾಗ ಒಂದು check post ಮತ್ತು security guards ಇದ್ದರು. ನನ್ನ ಮುಖವನ್ನು ಮಾತಿಲ್ಲದೆ "ಎನು?" ಎಂಬಂತೆ ನೋಡಿದರು. ಹಿಂದೆ ಇದ್ದ ರಾಜು ಕೈ ಆಡಿಸಿದರು. check post ತೆರೆಯಿತು. ಒಳಗೆ ಹೋದ ನಂತರ ಮುಖ್ಯದ್ವಾರ ಕಾಣಿಸಿತು. ಮುಖ್ಯದ್ವಾರಕ್ಕೆ ದೊಡ್ಡ gate ಅದಕ್ಕೆ ಬೀಗ ಹಾಕಿತ್ತು. ಅಲ್ಲಿಯೂ ಕೆಲವರು security guards ಜೊತೆಗೆ ಮೂರು ಜನ ಶಿಷ್ಯಂದಿರೂ ಇದ್ದರು. ಅವರನ್ನು ನೋಡಿದೊಡನೆ ಸ್ವಲ್ಪ ಭಯ ಆಯಿತು! ಬಿಳೀ ಜುಬ್ಬ, ಬಿಳೀ ಕಚ್ಚೆ ಪಂಚೆ ಧರಿಸಿದ್ದ ಅವರು ಎಲ್ಲರೂ ನಿತ್ಯನಂದನ styleನಲ್ಲೆ ಮಧ್ಯ ಬೈತಲೆ, ಆ ಕಡೆ ಈ ಕಡೆ ಮಾರುದ್ದ ಕೂದಲು ಇಳಿ ಬಿಟ್ಟು, ನಿತ್ಯಾನಂದ photo ಇದ್ದ dollor ಇದ್ದ ರುದ್ರಾಕ್ಷಿ ಮಾಲೆ ಧರಿಸಿ, ಹಣೆಗೆ ಒಂದು ರೂಪಾಯಿ ನಾಣ್ಯದಷ್ಟು ಅಗಲದ ಕುಂಕುಮ ಧರಿಸಿದ್ದರು. ತಮಿಳಿನಲ್ಲಿ ಮಾತನಾಡುತಿದ್ದ ಅವರು ಶುದ್ದ ಕಪ್ಪು ಬಣ್ಣದವರಾಗಿದ್ದರು. ನಾನು ಒಬ್ಬನೆ ಬಂದಿದ್ದರೆ ಇವರ ಅವತಾರ ನೋಡಿ ಭಯವಾಗಿ ವಾಪಸ್ ಹೋಗಿಬಿಡುತಿದ್ದೆ! Gate ಬಳಿ ಬಂದು ಯಾರು ಎಂದು ನೋಡಿದ ಅವರು ಹಿಂದೆ ಕೂತಿದ್ದವರಿಗೆ




-----------------@ ಆನಂದಲಿಂಗ ಕೊಳ@-----------------



ನಮಸ್ಕಾರ ಹೊಡೆದರು ನಂತರ ಇವರು ಯಾರು ಎಂದು ನನ್ನೆಡೆ ಕೈ ಮಾಡಿ ಕೇಳಿದರು. ರಾಜು ಅವರು "ನಮ್ಮವರೆ.. ಕೆಲಸಕ್ಕೆ ಸಹಾಯ ಮಾಡಲು ಬಂದಿದ್ದಾರೆ" ಎಂದರು. checking ಮಾಡದೆ ಒಳಗೆ ಬಿಟ್ಟರು. ಒಳಗೆ ಹೋಗುತ್ತಿದಂತೆ ಬಲಗಡೆ ಕಂಡಿದ್ದು ಆನಂದ ಲಿಂಗ. ಇಲ್ಲಿ ಕೊಳದಂತೆ ಮಾಡಿ ಅದರಲ್ಲಿ ಸುತ್ತಲೂ ನೂರಾರು ಲಿಂಗಗಳಿಟ್ಟು ಮಧ್ಯದಲ್ಲಿ ಒಂದು ಬೃಹತ್ ಲಿಂಗವಿದೆ. ಇಲ್ಲಿ ಆ ಲಿಂಗಕ್ಕೆ "Healing Power" ಇದೆ ಎಂದು ಹೇಳುತ್ತಾರೆ. ಆ ಲಿಂಗದ ಮುಂದೆ ಕುಳಿತು ಧ್ಯಾನ ಮಾಡಿದರೆ ಖಾಯಿಲೆಗಳು ವಾಸಿಯಾಗುತ್ತದಂತೆ! ಸದ್ಯ ಖಾಯಿಲೆ ವಾಸಿಯಾಗುವ ಮಾತು ಬದಿಗಿರಲಿ.. ನಿತ್ಯಾನಂದನ ಆಶ್ರಮ ಸೇರಿದವರಿಗೆ ವಾಸಿಯಾಗದಿರುವ ಆ ದೊಡ್ಡ ಖಾಯಿಲೆ ಬಾರದಿದ್ದರೆ ಅದೇ ದೊಡ್ಡ ಪವಾಡ ಎನಿಸಬಹುದೇನೋ?! ಈ ಜಾಗವನ್ನು ನೋಡಿದ ಕೂಡಲೆ ಬಹಳ ಹೊತ್ತಿನಿಂದ ಹೊರ ಬರಲು ಕಾಯುತ್ತಿದ್ದ ನನ್ನ camera ಪಟ್ಟನೆ ಹೊರ ಬಂದಿತು. ರಾಜು ಎಚ್ಚರಿಕೆ ನೀಡಿದರು - "ಆ ವೀಡಿಯೋ ಹೊರಗೆ ಬಂದು case ಆದಾಗಿನಿಂದ ಇಲ್ಲಿನ ಜನ camera ಕಂಡರೆ ಬೆಚ್ಚಿ ಬೀಳುತ್ತಾರೆ... ಅದನ್ನು ಹಾಗೆ ಭದ್ರವಾಗಿ ಒಳಗೆ ಇಟ್ಟುಕೊಂಡು ಬಿಡಿ. ಮತ್ತೆಲ್ಲೂ ತೆಗೆಯಬೇಡಿ" ಎಂದು ಎಚ್ಚರಿಸಿದರು.
ಆ ಆನಂದಲಿಂಗದಿಂದ ಮುಂದೆ ನಡೆದು ಹೋದೆ. ಅಲ್ಲಿ ಒಂದು ಪ್ರಾರ್ಥನಾ ಮಂದಿರ ಇತ್ತು. ಅಲ್ಲಿ ಕೆಲವರು ಭಕ್ತಾದಿಗಳು ಕುಳಿತಿದ್ದರು. ಅವರೆಲ್ಲರದ್ದೂ ಅದೇ ವೇಷ. ಅವರ ಹಾವ-ಭಾವ, ಮಾತನಾಡುವ ಶೈಲಿ ಇವೆಲ್ಲ ನೋಡಿದರೆ ಏನೋ ಹೆಚ್ಚು ಕಮ್ಮಿಯಾದಂತೆ ಕಾಣುತಿತ್ತು. ಹಿಂದಿ ಚಿತ್ರ Dostana ನೆನಪಾಯಿತು! ಅವರೆಲ್ಲರೂ ಭಕ್ತಿ"ಗೇ" ಭಕ್ತರಂತೆ ಕಾಣುತ್ತಿದ್ದರು!! ಪ್ರಾರ್ಥನಾ ಮಂದಿರದ ಎದುರು ಬಂದು ಕುಳಿತಾಗ ಬಿಸಿ ಬಿಸಿ ಕಾಫ಼ಿ ಬಂತು.. ರಾಜು ತೆಗೆದುಕೊಂಡರು, ನಾನು ಬೇಡವೆಂದೆ. (ಅದರಲ್ಲಿ ಏನಾದರೂ ಬೆರೆಸಿರಬಹುದೇ? ಎಂಬ ಅನುಮಾನ ಸುಳಿಯದಿರಲಿಲ್ಲ!) ಕಾಫ಼ಿ ಕುಡಿಯುತ್ತಾ ಪ್ರಾರ್ಥನಾ ಮಂದಿರದ ಹಿಂಬದಿಗೆ ಇದ್ದ ನಿತ್ಯಾನಂದನ Rest house ಅನ್ನು ಅರ್ಧ ತೆಗೆದ ಕದದೊಳಗಿಂದ ರಾಜು ತೋರಿಸಿದರು.. ಒಳ್ಳೆ luxury ಮನೆಯಂತಿತ್ತು. ಅದರ ಹತ್ತಿರವೂ ಯಾರಿಗೂ ಸುಳಿದಾಡಲು ಪ್ರವೇಶವಿರಲಿಲ್ಲ. "ಅಲ್ಲೇ ಸಾರ್.. ಅವರ ಸಿನೆಮಾ ಶೂಟಿಂಗ್ ಆಗಿದ್ದಿದ್ದು.." ಎಂದು ರಾಜು ನಕ್ಕರು. ಸುತ್ತ ಮುತ್ತಲೂ ಭಯಂಕರ ಭಕ್ತರು ಓಡಾಡುತ್ತಿದ್ದರಿಂದ ಇಲ್ಲಿ camera ತೆಗೆಯಲು ಸಾಧ್ಯವಾಗಲಿಲ್ಲ.
ಅಲ್ಲಿಂದ ಹೊರಟು ಬಲ ತಿರುವಿನಲ್ಲಿ 'ಶ್ರೀ ಆನಂದೇಶ್ವರ ದೇವಾಲಯ'. ಈ ದೇವಾಲಯದ ಎದುರಿಗೇ ನಿತ್ಯಾನಂದ ಪಂಚಾಗ್ನಿ ವ್ರತ ಮಾಡಿದ್ದಿದ್ದು. ಈ ಸ್ಠಳದಲ್ಲಿ ದುಂಡಾಕಾರದ ಬೂದಿ ಸಹ ಇನ್ನೂ ಹಾಗೇ ಇತ್ತು. ದೇವಸ್ಥಾನದ ಒಳಗೆ ಇನ್ನೊಂದು ಆಶ್ಚರ್ಯ ಕಂಡೆ. ಅಲ್ಲಿ ಒಬ್ಬರು ನಿತ್ಯಾನಂದನ ಭಕ್ತೆಯಿದ್ದರು. ಅವರದ್ದು ಏನು ಓಯ್ಯಾರ ಅಂತಿರಾ!! ಆಹಾ!! full make-up ಮಾಡ್ಕೊಂಡು ಮಿಂಚಿಂಗೋ ಮಿಂಚಿಂಗ್!! ಬಿಳೀ ಸೀರೆಯಲ್ಲಿದ್ದ ಅವರು lipstick ಜೋರಾಗೆ ಬಳಿದುಕೊಂಡಿದ್ದರು. ಅವರು ಪೂಜೆಗಂತೂ ಬಂದವರಂತೆ ಕಾಣುತ್ತಿರಲಿಲ್ಲ!
ದೇವಸ್ಥಾನದಲ್ಲಿ ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡ ಈಶ್ವರನ 'ಆನಂದೇಶ್ವರ ರೂಪ'. ಅದರ ಎದುರು ಒಂದು ಲಿಂಗ. ಆಹ! ಶಂಭೋ ಶಂಕರ ಎಂದು ಕೈ ಮುಗಿಯೋಣ ಅಂದು ಕೊಂಡರೆ ಮತ್ತೆ ಆ ಲಿಂಗದ ಎದುರಿಗೆ ಒಂದೂವರೆ ಅಡಿ ಎತ್ತರದ ನಿತ್ಯಾನಂದನ ಅಮೃತಶಿಲೆಯ (Marble) ವಿಗ್ರಹ. ನನ್ನ ನಮನಗಳು ನಿತ್ಯಾನಂದನ ವಿಗ್ರಹವನ್ನು bypass ಮಾಡಿ ಹಿಂದೆ ಇರುವ ಲಿಂಗಕ್ಕೆ ಹೋಗಲಿ ಎಂದುಕೊಂಡೆ.


------------@ 600 ವರ್ಷದ ಹಿಂದಿನ ಆಲದ ಮರ @-------------



ನಂತರ ರಾಜು ದೇವಾಲಯದ ಹಿಂಭಾಗಕ್ಕೆ ಕೊಂಡೊಯ್ದರು. ಅಲ್ಲಿ ಒಂದು ಬೃಹತ್ ಆಲದ ಮರ. ಸುಮಾರು 600 ವರ್ಷ ಹಳೆಯದೆಂಬ ಪ್ರತೀತಿ ಇಲ್ಲಿದೆ. 4X4 ಚದುರಡಿ ಅಗಲವಾದ ಆ ಮರದ ಪೊಟರೆಯೊಳಗೆ ಶಿವಲಿಂಗವೊಂದು ದೊರೆತಿತ್ತೆಂದು ಹೇಳಲಾಗುತ್ತದೆ. ಈಗಲೂ ಆ ಪೊಟರೆಯೊಳಗಿನ ಗುಹೆ ಹಾಗೇ ಇದೆ. ಒಬ್ಬ ಮನುಷ್ಯ ಹೊಗಿ ಕೂತು ಬರಬಹುದಾದಷ್ಟು ದೊಡ್ಡ ಗುಹೆ ಇದೆ ಆ ಜೀವಂತ ಮರದ ಪೊಟರೆಯೊಳಗೆ! ಅದರ ಪಕ್ಕದಲ್ಲೆ ದಕ್ಷಿಣಾಮೂರ್ತಿ ವಿಗ್ರಹವಿದೆ.




------@ ಆಲದಮರದ ಪೊಟರೆಯೊಳಗೆ ಲಿಂಗ ದೊರೆತ ಗುಹೆ @---------







ಇಷ್ಟೆಲ್ಲ ನೋಡಿದ ಮೇಲೆ ನಿತ್ಯಾನಂದನನ್ನು ನೋಡದೆ ಹೋದರೆ ಹೇಗೆ ಎಂದು ಅನ್ನಿಸಿತು. ರಾಜು ಇಂದು ಸ್ವಾಮಿಗಳು ಸಿಗುವರೆ ಎಂದು ಯಾರನ್ನೋ ವಿಚಾರಿಸಿದಾಗ ಅದು ಸಾಧ್ಯವಿಲ್ಲ ಎಂದು ತಿಳಿಯಿತು. ರಾಜು ಮಠದ PRO - Public Relations Officer ಸದಾನಂದ ಜೊತೆ mobile ನಲ್ಲಿ ಮಾತಾಡಿದರೂ ಅದು ಸಾಧ್ಯವಾಗಲಿಲ್ಲ. ನಾವು ವಾಪಸ್ ಹೊರಡಬೇಕಾದರೆ, ನಿತ್ಯಾನಂದನ ಜೊತೆಗೆ ಜೈಲಿನಲ್ಲಿದ್ದ ಆತನ ಅಪ್ಪಟ ಶಿಷ್ಯ ಬೋಧಾನಂದನ ದರ್ಶನವಾಯಿತು.


---------@ ದಕ್ಷಿಣಾ ಮೂರ್ತಿ ವಿಗ್ರಹ @------------


ಆತ ಯಾರೋ VIPಗಳ ಜೊತೆ ಓಡಾಡ್ತಾ ಇದ್ದ. ಆಗಲೆ ನನಗೆ ತಿಳಿದದ್ದು ತಮಿಳುನಾಡಿನ ತಿರುವನ್ನಮಲೈ ಊರಿನ 'ರಾಜಶೇಖರ' ಸ್ವಯಂ ಘೋಷಿತ ಪರಮಹಂಸ ನಿತ್ಯಾನಂದ ಆದ ಹಾಗೆ ಇಲ್ಲಿನ ಮಠದ ಎಲ್ಲರೂ ತಮ್ಮ ತಮ್ಮ ಹೆಸರುಗಳನ್ನು ಯಾವುದೋ ಆನಂದವನ್ನಾಗಿ ಬದಲಾಯಿಸಿಕೊಂಡು ಆನಂದವಾಗಿದ್ದಾರೆ!!
ವಾಪಸ್ ಹೊರಡುವಾಗ ನನಗೆ ವೀರಪ್ಪನ್ ಪಾಳೆಯದಲ್ಲಿ ಸುತ್ತಾಡಿ ಬಂದ ನಕ್ಕೀರನ್ ಪತ್ರಿಕೆ ಸಂಪಾದಕ ರಾಜ್ ಗೋಪಾಲನಂತೆ ಭಾಸವಾಗುತಿತ್ತು! ಒಂದು ಅಪೂರ್ವ ಅನುಭವ!! ರಾಜು ಅವರು ಸಹ ರಾಮನಗರದ ಕಡೆ ಹೊರಟಿರುವರೆಂದು ತಿಳಿಯಿತು. ಮಾತನಾಡುತ್ತಾ ಗಾಡಿಯಲ್ಲಿ ಹೊರಟೆವು.


ನಾನು: "ಅಲ್ಲಿ ಏನು ಕೆಲಸ?"
ರಾಜು: "ಆಫ಼ೀಸಿನಲ್ಲಿ meeting ಇದೆ"


ರಾಮನಗರ ತಲುಪಿದ ನಂತರ ಸೀದಾ Police Station ಎದುರಿಗೆ ಗಾಡಿ ನಿಲ್ಲಿಸಲು ಹೇಳಿ ಇಳಿದುಕೊಂಡರು.


ನನು: "ಎಲ್ಲಿದೆ ನಿಮ್ಮ ಆಫ಼ೀಸು?"
ರಜು: "ಇದೇ ನಮ್ಮ station" ಎಂದು ನಕ್ಕರು.


ನನಗೆ ಮಾತೇ ಹೊರಡಲಿಲ್ಲ.. ಅವರು ಮುಂದುವರಿಸಿದರು.. " ನಾನು Police Constable ನಿತ್ಯಾನಂದನ ಆಶ್ರಮದಲ್ಲಿ secret Invigilation ಗೆ ಬಂದಿದ್ದೆ. ಅಲ್ಲಿ ನಡೆಯುವ ಕಾರ್ಯಗಳು, ಬಂದು ಹೋಗುವ ಜನಗಳು, ಎಲ್ಲದರ ಮೇಲು ಒಂದು ಕಣ್ಣಿಟ್ಟು ಪೋಲೀಸರಿಗೆ information ಕೊಡೋಕೆ ನಮ್ಮನ್ನ Civil dress ನಲ್ಲಿ ಅಲ್ಲಿಗೆ ಕಳುಹಿಸಿದ್ದರು. ಗಲಾಟೆ ನಡೆದಾಗಿನಿಂದಲೂ ನಿತ್ಯವೂ ಅಲ್ಲಿಗೆ ಇದೇ ರೀತಿ ಹೋಗಿ ಬರ್ತೀವಿ. ತುಂಬಾ thanks.. ಬೆಟ್ಟಕ್ಕೆ ಹೋಗಿ ಬನ್ನಿ. ನಿಮಗೆ ಏನಾದರೂ ತೊಂದರೆ ಆದರೆ ನನಗೆ ಫೋನ್ ಮಾಡಿ ನನ್ನ ನಂಬರ್...." ಎಂದು mobile number ಕೊಟ್ಟು ಅವರು ಹೊರಟು ಹೋದರು. ಅವರು ಹೇಳಿದ್ದು ಕೇಳಿ ಆಶ್ಚರ್ಯವಾಗಿ ನಾನು ಒಂದು ನಿಮಿಷ ಅಲುಗಾಡದೇ ನಿಂತೆ!!




-------@ ಶ್ರೀ ರಾಮ ಬೆಟ್ಟದ ಮೇಲಿನ ರಾಮ ಮಂದಿರ @---------





ಬೆಟ್ಟದ ಮೇಲಿಂದ ರಾಮನಗರದ ಸುತ್ತಮುತ್ತಲಿನ ಎಲ್ಲ ಬೆಟ್ಟ-ಗುಡ್ಡಗಳು ಕಾಣುತ್ತವೆ. ಈ ಬೆಟ್ಟ ಗುಡ್ಡಗಳ ನಡುವೇನೆ 1975 ಹಿಂದಿ ಚಿತ್ರ 'Sholay' ಚಿತ್ರೀಕರಣವಾಗಿದ್ದು!15th August 2010 ಗೆ ಅದು ಬಿಡುಗಡೆಯಾಗಿ 35 ವರ್ಷ ತುಂಬಿತು!
==================================================